ಅಹಿಂಸೆ ಪ್ರತಿಪಾದಿಸಿದ ಗಾಂಧಿಯ ಪೋಟೋದೊಂದಿಗೆ, ಹಿಂಸೆಯನ್ನು ಪ್ರತಿಪಾದಿಸಿದ, ಗಾಂಧಿಯ ಕೊಲೆಗೆ ಸಹಕರಿಸಿದ ವ್ಯಕ್ತಿಯ ಭಾವಚಿತ್ರವನ್ನು ಸದನದಲ್ಲಿ ಹಾಕುವ ಮೂಲಕ ಸಾಮಾಜಿಕ ನ್ಯಾಯವನ್ನು ಬುಡಮೇಲು ಮಾಡುವ ಕೃತ್ಯ ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿ ವರ್ಮಕುಮಾರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಪಾದಯಾತ್ರೆ, ಸಂಬಂಧಗಳ ಬೆಸುಗೆ-ಬಹುತ್ವದ ನೆಲೆ ಎಂಬ ವಿಚಾರ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತ ಸಮುದಾಯಗಳಿಗೆ ಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಭಾರತದಲ್ಲಿ ಇಂದು ಇಡಬ್ಲ್ಯೂಎಸ್ ಹೆಸರಿನಲ್ಲಿ ಸಾಮಾಜಿಕ ನ್ಯಾಯಕ್ಕೆ ತದ್ವಿರುದ್ದವಾದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವ ಕೆಲಸ ನಡೆದಿದೆ ಎಂದರು.
ಅಭಿವ್ಯಕ್ತಿ ಸ್ವಾತಂತ್ರವೆಂಬುದು ಭಾರತದ ಪ್ರಜೆಗೆ ಇರುವ ಬಹುದೊಡ್ಡ ಆಸ್ತಿ. ಆದರೆ ಕೆಲ ವರ್ಷಗಳಿಂದ ಕಾಶ್ಮೀರ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ ಮರೀಚಿಕೆಯಾಗಿದೆ. ಇಂಟರ್ನೆಟ್, ಮೊಬೈಲ್ ನೆಟ್ವರ್ಕ್ಗಳನ್ನು ಸ್ಥಗಿತಗೊಳಿಸಿ, ಅಲ್ಲಿನ ಜನರ ಹಕ್ಕುಗಳನ್ನು ಕಸಿಯಲಾಗಿದೆ. ಇದರ ವಿರುದ್ದ ಅನೇಕ ದೂರುಗಳು ಸುಪ್ರಿಂಕೋರ್ಟಿನಲ್ಲಿ ದಾಖಲಾದರೂ ಇದುವರೆಗೂ ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಕೆ.ದೊರೆರಾಜು ಮಾತನಾಡಿ,ಅಸ್ಪೃಷ್ಯತೆಯಿರುವ ದೇಶದಲ್ಲಿ ರಾಹುಲ್ಗಾಂಧಿ ಅಸ್ಪೃಶ್ಯರ ಹೆಗಲ ಮೇಲೆ ಕೈ ಹಾಕಿದ್ದಾರೆ ಎಂಬುದು ಜನರ ಮನಸ್ಸಿನೊಳಗೆ ದೊಡ್ಡ ಸಂಚಲನ ಉಂಟು ಮಾಡಿದೆ. ದುಡಿಯುವ ವರ್ಗ, ಮಹಿಳೆಯರು ಜೀವ ಕೈಯಲ್ಲಿಡಿದು ಬದುಕುತ್ತಿರುವ ಈ ಕಾಲದಲ್ಲಿ ನಿಮ್ಮದೊಂದಿಗೆ ನಾವಿದ್ದೇವೆ ಎಂದು ಹೇಳುವ ಮೂಲಕ ಭಾರತ ಜೋಡೋ ಯಾತ್ರೆ ಮನುಷ್ಯರ ಮನಸ್ಸಗಳನ್ನು ಬೆಸೆಯುವ ಕೆಲಸ ಮಾಡಿದೆ. ಜನರ ಪಾಲ್ಗೊಳ್ಳುವಿಕೆಯ ಮೂಲಕ ಭಾರತ ಸಂವಿಧಾನವನ್ನು ಪುನರ್ ಸ್ಥಾಪಿಸಬೇಕಿದೆ ಎಂದರು.


