ಮುಂಬರುವ ವಿಧಾನಸಭಾ ಚುನಾವಣೆಗಾಗಿ ತುಮಕೂರು ನಗರ ಕ್ಷೇತ್ರಕ್ಕೆ ವರಿಷ್ಠರು ಅಧಿಕೃತ ಅಭ್ಯರ್ಥಿಯ ಹೆಸರನ್ನು ಘೋಷಿಸಿದ್ದರೂ ಕೂಡ ಜೆಡಿಎಸ್ ಪಕ್ಷದಲ್ಲಿ ಗೊಂದಲಗಳು ಹಾಗೆಯೇ ಮುಂದುವರೆದಿವೆ. ಉಭಯ ಮುಖಂಡರು ‘ಅಭ್ಯರ್ಥಿ ನಾನೇ’ ಎಂದು ಹೇಳಿಕೊಂಡು ತಿರುಗುತ್ತಿ ರುವುದು ಸಾಮಾನ್ಯವಾಗಿದೆ.
ನೀರ್ ಗೋವಿಂದರಾಜು ಮತ್ತು ಬೊಮ್ಮನಹಳ್ಳಿ ಅಟಿಕಾ ಬಾಬು ನಡುವೆಯ ವಾಗ್ವಾದ ಮುಂದುವರೆದಿದೆ. ಜೆಡಿಎಸ್ ವರಿಷ್ಠರು ಅಧಿಕೃತ ಅಭ್ಯರ್ಥಿ ನೀರು ಗೋವಿಂದರಾಜು ಎಂದು ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಹೇಳಿದ್ದರು. ಅದರಂತೆ ತುಮಕೂರು ನಗರ ಕ್ಷೇತ್ರಕ್ಕೆ ನೀರು ಗೋವಿಂದರಾಜು ಅಧಿಕೃತ ಅಭ್ಯರ್ಥಿ ಎಂದು ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರು ಉಭಯ ನಾಯಕರ ನಡುವೆ ಜಟಾಪಟಿ ನಡೆಯುತ್ತಲೆ ಇದೆ.
ಗೋವಿಂದರಾಜು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಗೆಳೆಯರ ಬಳಗ ಕಟ್ಟಿಕೊಂಡು 2ನೇ ಸುತ್ತಿನ ಪ್ರಚಾರ ನಡೆಸಿದ್ದಾರೆ. ಪ್ರಚಾರ ನಡೆಸುವಲ್ಲಿ ಅಟಿಕಾ ಬಾಬು ಕೂಡ ಹಿಂದಿ ಬಿದ್ದಿಲ್ಲ. ಉಭಯ ಮುಖಂಡರು ಮಾಧ್ಯಮಗೋಷ್ಠಿ ಕರೆದು ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ.
ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರಿಗೆ ಹಣ ಕೊಟ್ಟಿದ್ದೇನೆ ಎಂದು ಅಟ್ಟಿಕಾ ಬಾಬು ಹೇಳಿರುವ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಇಬ್ಬರೂ ಮುಖಂಡರು ಯಾರಿಗೇನೂ ಕಡಿಮೆ ಇಲ್ಲ ಎಂಬಂತೆ ಪೈಪೋಟಿ ಮೇಲೆ ಪ್ರಚಾರ ನಡೆಸುತ್ತಿದ್ದಾರೆ.
ಶುಕ್ರವಾರ ರಾತ್ರಿ ಅಟ್ಟಿಕಾ ಬಾಬು ತುಮಕೂರು ನಗರಕ್ಕೆ ಬಂದು ಪ್ರಚಾರ ಮಾಡಿ ಬೆಂಗಳೂರಿಗೆ ಹೊರಡುತ್ತಿದ್ದ ವೇಳೆ ನೀರು ಗೋವಿಂದರಾಜು ಬೆಂಬಲಿಗರು ಕಾರನ್ನು ಅಡ್ಡಗಟ್ಟಿ ಅಟ್ಟಿಕಾ ಬಾಭು ಅವರಿಗೆ ದಿಕ್ಕಾರ ಕೂಗಿರುವ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿವೆ.
ಉಭಯ ಮುಖಂಡರ ಜಗಳ ಬೀದಿಗೆ ಬಿದ್ದಿದೆ. ಇದರಿಂದ ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳ ನಡುವೆ ಗೊಂದಲ ಮುಂದುವರೆದಿದೆ. ಅಟ್ಟಿಕಾ ಬಾಬು ಮತ್ತು ನೀರು ಗೋವಿಂದರಾಜು ಇಬ್ಬರೂ ನಗರ ಕ್ಷೇತ್ರಕ್ಕೆ ಸ್ಪರ್ಧಿಸಲು ಪೈಪೋಟಿ ಮುಂದುವರೆದಿದೆ. ಹೀಗಾಗಿ ಯಾರಿಗೆ ಟಿಕೆಟ್ ನೀಡುತ್ತಾರೆಂಬುದು ಕುತೂಹಲ ಕೆರಳಿಸಿದೆ.