ಹಾಲಿನ ದರವನ್ನು 10ರೂಪಾಯಿಗೆ ಬೇಕಾದರೆ ಹೆಚ್ಚಿಸಲಿ, ಆದರೆ ಆ ಹಣವನ್ನು ಕಚೇರಿ ಕೆಲಸಕ್ಕೆ, ಸಂಬಳ ಸಾರಿಗೆಗೆ ಬಳಸಿಕೊಳ್ಳಬಾರದು. 10 ರೂಗಳನ್ನು ಹಾಲು ಉತ್ಪಾದಕರಿಗೇ ನೀಡಬೇಕು ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಹಾಲು ಉತ್ಪಾದಕರ ಸ್ಥಿತಿ ಕಷ್ಟಕರವಾಗಿದೆ. ಹಾಗಾಗಿ ಹಾಲಿನ ದರವನ್ನು ಎಷ್ಟೇ ಹೆಚ್ಚಳ ಮಾಡಿದರೂ ಅಷ್ಟೂ ಹಣವನ್ನು ಹಾಲು ಉತ್ಪಾದಕರಿಗೆ ನೀಡಬೇಕು ಆಗ್ರಹಿಸಿದರು.
ರಾಜ್ಯ ಸರ್ಕಾರದಿಂದ ಪುನರ್ ಸ್ಥಾಪಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿಯಲ್ಲಿ ಸಹಕಾರ ಸಂಘಗಳ ಮೂಲಕ ಜಿಲ್ಲೆಯ ಹೆಚ್ಚು ಮಂದಿ ರೈತರು ಸದಸ್ಯತ್ವ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಯಶಸ್ವಿನಿ ಯೋಜನೆಯಡಿ ನೋಂದಾಯಿತ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ 1650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಪ್ರತಿ ಕುಟುಂಬಕ್ಕೆ 5 ಲಕ್ಷ ರೂವರೆಗೆ ಆರೋಗ್ಯ ವಿಮಾ ಸೌಲಭ್ಯವಿದೆ. ಪ್ರತಿಯೊಬ್ಬರು ಈ ಸೌಲಭ್ಯವನ್ನು ಪಡೆಯಬೇಕೆಂದರು.
ಹಾಗಾಗಿ ಎಲ್ಲಾ ರೈತರು ತಮ್ಮ ಹತ್ತಿರದ ವಿಎಸ್ಎಸ್ಎನ್ ಕಚೇರಿಯಲ್ಲಿ ಹೆಸರು ನೋಂದಾಯಿಸಿ, ಯಶಸ್ವಿನಿ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆಯವರಿಗೆ 500 ರೂ ನಿಗದಿಪಡಿಸಲಾಗಿದ್ದು ಇದರ ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.


