ಬಿಹಾರದ ಎರಡು ಮತ್ತು ತೆಲಂಗಾಣದ ಒಂದು ಸೇರಿದಂತೆ ಏಳು ವಿಧಾನಸಭಾ ಉಪಚುನಾವಣೆಗಳಲ್ಲಿ ಮತ ಎಣಿಕೆ ಪೂರ್ಣಗೊಂಡಿದ್ದು, 4 ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿದೆ. ಟಿಆರ್.ಎಸ್, ಶಿವಸೇನೆ, ಆರ್.ಜೆಡಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ಬಿಹಾರ, ತೆಲಂಗಾಣ, ಒಡಿಶಾ, ಯುಪಿ, ಮಹಾರಾಷ್ಟ್ರ ಮತ್ತು ಹರಿಯಾಣ - ಆರು ರಾಜ್ಯಗಳಲ್ಲಿ ಹರಡಿರುವ ಏಳು ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ. ಬಿಹಾರದ ಮೊಕಾಮಾದಲ್ಲಿ ನಡೆದ ಉಪಚುನಾವಣೆಯಲ್ಲಿ ಆರ್.ಜೆ.ಡಿಯ ನೀಲಮ್ ದೇವಿ ಜಯ ಗಳಿಸಿದ್ದಾರೆ.
ತೆಲಂಗಾಣದ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಟಿಆರ್.ಎಸ್. ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡಿದರು. ಈ ನಡುವೆಯೂ ಆಡಳಿತಾರೂಢ ಟಿಆರ್.ಎಸ್ ಅಭ್ಯರ್ಥಿ ಗೆಲುವು ಸಾಧಿಸಿದರು.
ಮುನುಗೊಡು ಕ್ಷೇತ್ರದಲ್ಲಿ 2 ಮತ್ತು 3ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸುತ್ತಿನಲ್ಲೂ ಟಿಆರ್.ಎಸ್ ಅಭ್ಯರ್ಥಿ ಮುನ್ನಡೆಯನ್ನು ಕಾಯ್ದುಕೊಂಡು ಬಂದರು. ಪ್ರತಿಯೊಂದು ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದರಿಂದ ಟಿಆರ್.ಎಸ್ ಗೆಲುವಿಗೆ ಕಾರಣವಾಯ್ತು.
15ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡನ ನಂತರ ಟಿಆರ್.ಎಸ್ ಅಭ್ಯರ್ಥಿ 97,005 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 86,697 ಮತಗಳನ್ನು ಗಳಿಸಿ ಹಿನ್ನಡೆ ಅನುಭವಿಸಿದರು. ಬಿಜೆಪಿ ವಿರುದ್ಧ 10,308 ಮತಗಳ ಅಂತರದಿಂದ ಟಿಆರ್.ಎಸ್ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡು ವಿಜಯದ ಮಾಲೆ ಹಾಕಿಕೊಂಡರು.
ಉದ್ದವ್ ಠಾಕ್ರೆಯ ಶಿವಸೇನ ಅಭ್ಯರ್ಥಿ ಗೆಲುವು
ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಹೊಸ ಪಕ್ಷದ ಹೆಸರು ಮತ್ತು ಚಿಹ್ನೆಯೊಂದಿಗೆ ಉದ್ಧವ್ ಠಾಕ್ರೆ ಅಭ್ಯರ್ಥಿ ರುತುಜಾ ಲಟ್ಕೆ 53,471 ಮತಗಳಿಂದ ಗೆದ್ದಿದ್ದಾರೆ. ಶಿಂಧೆ ಗುಂಪಿನ ಪೈಪೋಟಿಯ ಹೊರತಾಗಿಯೂ ಮುಂಬೈನಲ್ಲಿ ಠಾಕ್ರೆ ಅವರ ಪಕ್ಷ ಬಲಿಷ್ಠವಾಗಿರುವುದನ್ನು ಇದು ತೋರಿಸುತ್ತದೆ. ಈ ಉಪಚುನಾವಣೆ ಗೆಲುವು ಉದ್ಧವ್ ಠಾಕ್ರೆ ಅವರ ಸೇನೆಯ ನೈತಿಕತೆಯನ್ನು ಖಂಡಿತವಾಗಿ ಹೆಚ್ಚಿಸಲಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯ ಗೋಲ ಗೋಕರನಾಥ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯು 30,000 ಮತಗಳ ಅಂತರದಿಂದ ತನ್ನ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ವಿನಯ್ ತಿವಾರಿ ಅವರನ್ನು ಸೋಲಿಸಿ ಗೆಲುವು ಸಾಧಿಸಿದೆ. (ಅಪ್ ಡೇಟ್ ಮಾಡಲಾಗಿದೆ)


