ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆಯಲ್ಲಿ ಅಹವಾಲು ಸಲ್ಲಿಸಲು ಬಂದ ಮಹಿಳೆಯೊಬ್ಬರಿಗೆ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ಮಾಡಿರುವ ಪ್ರಕರಣದ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು ಭಾನುವಾರ ಕ್ಷಮೆ ಯಾಚಿಸಿದ್ದಾರೆ.
ಆದರೆ ಮಹಿಳೆಗೆ ಕಪಾಳಮೋಕ್ಷ ಮಾಡಿರುವುದನ್ನು ನಿರಾಕರಿಸಿರುವ ಸಚಿವ ಸೋಮಣ್ಣ, ಮಹಿಳೆ ಬೇರೊಂದು ವಿಡಿಯೋವನ್ನು ವೈರಲ್ ಮಾಡಿದ್ದಾಳೆ. ವೈರಲ್ ಆಗಿರುವ ವಿಡಿಯೋ ತಮಗೆ ಸಂಬಂದಿಸಿದ್ದಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.
ಘಟನೆ ನಡೆದು ಒಂದು ದಿನ ಬಳಿಕ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡಿ ಕ್ಷಮೆಯಾಚಿಸಿದ್ದು, ಮಹಿಳೆಗೆ ಕಪಾಳ ಮೋಕ್ಷ ಮಾಡಿರುವುದನ್ನು ನಿರಾಕರಿಸಿದರು.
ಬಿಜೆಪಿ ಮುಖಂಡ ಹಾಗೂ ಸಚಿವ ಸೋಮಣ್ಣ ವಿವಾದಕ್ಕೆ ಸಿಲುಕಿದ್ದು ಇದು ಮೊದಲನೇ ಪ್ರಕರಣವೇನೂ ಅಲ್ಲ. 2020ರಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹಿರಿಯ ಸಚಿವರು ಸರ್ಕಾರದ ಸಣ್ಣಪುಟ್ಟ ವಿಷಯಗಳಿಗೂ ಅಸಮಾಧಾನ ವ್ಯಕ್ತಪಡಿಸುವ ವ್ಯಕ್ತಿ ಎಂದು ಸಹದ್ಯೋಗಿ ಸಚಿವರು ಹೇಳುತ್ತಾರೆ.
ಈಗಿರುವ ಸಚಿವರ ಪೈಕಿ ಸೋಮಣ್ಣ ಅವರು ಹಿರಿಯ ನಾಯಕರೆಂದು ಭಾವಿಸಿದ್ದಾರೆ ಮತ್ತು ಪ್ರಮುಖ ಖಾತೆಯ ನಿರೀಕ್ಷೆಯಲ್ಲಿಯೂ ಸೋಮಣ್ಣ ಇದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವ ಸೋಮಣ್ಣ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗೂ ವಾಗ್ವಾದಕ್ಕಿಳಿದ್ದರು. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಇರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಸೋಮಣ್ಣ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.


