ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಸೇರಿದ 22 ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಮತ್ತು ಶಿಂಧೆ ಅವರ ಬದಲಿಗೆ ಬಿಜೆಪಿ ನಾಯಕರನ್ನು ನೇಮಿಸಲು ಸಿದ್ದತೆ ನಡೆದಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಬರೆದಿರುವುದನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಶಿಂಧೆ ಬಣದ 22 ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಳ್ಳುವ ಗುಂಪನ್ನು ರಚಿಸಲಾಗಿದೆ. ಶಿಂಧೆ-ಬಿಜೆಪಿ ಸರ್ಕಾರ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಶಿಂಧೆ ಅವರನ್ನು ಯಾವಾಗ ಬೇಕಾದರೂ ಕೆಳಗಿಳಿಸುವಂತೆ ಹೇಳಲಾಗುವುದು ಮತ್ತು ಬಿಜೆಪಿ ನಾಯಕರೊಬ್ಬರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿಂಧೆ ಅವರು ಕೇಂದ್ರ ಸಚಿವ ಮತ್ತು ಆರ್.ಪಿಐ ನಾಯಕ ರಾಮದಾಸ್ ಅಠವಳೆ ಅವರಂತೆ ಆಗುತ್ತಾರೆ ಎಂದು ಬಿಜೆಪಿಯ ಪ್ರಮುಖ ನಾಯಕರನ್ನು ಉಲ್ಲೇಖಿಸಿ ಹೇಳಿಕೊಂಡಿದೆ. ಬಿಜೆಪಿಗೆ ಮತ್ತೊಂದು ನಾರಾಯಣ ರಾಣೆ ಆಗಲು ಶಿಂದೆ ಅವರ ಉಳಿದ ಗುಂಪನ್ನು ಬಿಜೆಪಿಯೊಂದಿ ವಿಲೀನಗೊಳಿಸುವುದನ್ನು ಹೊರತುಪಡಿಸಿ ಯಾವುದೇ ಆಯ್ಕೆಗಳಿಲ್ಲ ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಶಿಂಧೆ ಯಾವುದೇ ಪ್ರಭಾವ ಹೊಂದಿಲ್ಲ. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಮನ್ನಣೆ ಸಿಗುವುದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮಾತ್ರ. ಸಿಎಂ ಶಿಂಧೆ ಮತ್ತು ಉಪಮುಖ್ಯಮಂತ್ರಿ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಉನ್ನತ ಪೊಲೀಸ್ ಫೋಸ್ಟಿಂಗ್ ವಿಚಾರವಾಗಿ ಘರ್ಷಣೆಗಳು ನಡೆದಿವೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ. ಗೃಹ ಸಚಿವರೂ ಆಗಿರುವ ಫಡ್ನವಿಸ್ ಅವರು ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವಾಗ ಶಿಂಧೆ ಅವರ ಸಲಹೆಯನ್ನು ಪಾಲಿಸಲಿಲ್ಲ. ಇದರಿಂದ ಬೇಸರಗೊಂಡ ಶಿಂಧೆ ಮುಂಬೈ ತೊರೆದು ಸತಾರಾದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


