ಉತ್ತರ ಪ್ರದೇಶದ ಲಖಿಂಪುರಖೇರಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರನ್ನು ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಒಂದು ದಿನದ ನಂತರ ಆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಸೆಕ್ಷನ್ ಗಳ ಅಡಿಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನ ಮೇಲೆ ಗುಂಡು ಹಾರಿಸಿ ನಂತರ ಹಿಡಿಯಲಾಗಿದೆ.
ಬಂಧಿತರನ್ನು ಸುಹೇಲ್, ಕರಿಮುದ್ದೀನ್, ಜುನೈದ್, ಆರಿಫ್, ಹಫೀಜುಲ್ ರೆಹಮಾನ್ ಹಾಗೂ ಗೌತಮ್ ಛೋಟು ಎಂದು ಗುರುತಿಸಲಾಗಿದೆ. ಬಾಲಕಿಯರನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಸುಹೇಲ್ ಮತ್ತು ಜುನೈದ್ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಲ್ಲಾ ಆರೋಪಿಗಳು ಮತ್ತು ಬಾಲಕಿಯರು ಒಂದೇ ಗ್ರಾಮದವರು. ಚೇತ್ರಂ ಪುತ್ರ ಛೋಟು ಈ ಹಿಂದೆ ಬಾಲಕಿಯರಿಗೆ ಪರಿಚಿತನಾಗಿದ್ದು, ಈತನೇ ಮೂವರು ಆರೋಪಿಗಳಿಗೆ ಬಾಲಕಿಯರನ್ನು ಪರಿಚಯಿಸಿದ್ದ. ನಂತರ ಬಾಲಕಿಯರನ್ನು ಮದುವೆಗೆ ಒತ್ತಾಯಿಸಿದ್ದು ಇದಕ್ಕೆ ಬಾಲಕಿಯರು ನಿರಾಕರಿಸಿದ್ದರು ಎನ್ನಲಾಗಿದೆ.
ಹೀಗಾಗಿ ಆರೋಪಿಗಳು ಸಹೋದರಿಯರ ಮೇಲೆ ಅತ್ಯಾಚಾರ ನಡೆಸಿ, ಕತ್ತು ಹಿಸುಕಿ, ನೇಣು ಹಾಕಿದ್ದಾರೆ ಎಂದು ಲಖಿಂಪುರಖೇರಿ ಎಸ್ಪಿ ಸಂಜಯ್ ಕುಮಾರ್ ಹೇಳಿದ್ದಾರೆ.
ಚೋಟು ಅಲಿಯಾಸ್ ಗೌತಮ್ ಹೊರತುಪಡಿಸಿ ಬಾಲಕಿಯರಿಗೆ ಪರಿಚಯವಿದ್ದ ಇತರ ಮೂವರು ಆರೋಪಿಗಳನ್ನು ಇಸ್ಲಾಮುದ್ದೀನ್ ಅವರ ಪುತ್ರ ಸುಹೇಲ್, ಹಫೀಜುಲ್ ರೆಹಮಾನ್ ಅಲಿಯಾಸ್ ಮಜಲ್ಕಾ ಮತ್ತು ಜುನೈದ್ ಎಂದು ಗುರುತಿಸಲಾಗಿದೆ ಎಂದು ಎಸ್ಪಿ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಗುರುವಾರ ಬೆಳಗ್ಗೆ ಜುನೈದ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಅವನ ಒಂದು ಕಾಲಿಗೆ ಗುಂಡೇಟಿನ ಗಾಯವಾಗಿದ್ದು ನಂತರ ಅವನನ್ನು ಬಂಧಿಸಲಾಯಿತು. ಇರಿಮುದ್ದೀನ್ ಅಲಿಯಾಸ್ ಡಿಡಿ ಮತ್ತು ಅಹ್ಮದ್ ಅವರ ಪುತ್ರ ಆರಿಫ್, ಹುಸೇನ್ ಈ ಬಾಲಕಿಯರನ್ನು ಮರಕ್ಕೆ ನೇಣು ಬಿಗಿಯುವಲ್ಲಿ ಸಹಾಯ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.