ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ, ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಶೂ, ಸಾಕ್ಸ್ ಗಳನ್ನು ವಿತರಣೆ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಿಎಸ್ಆರ್ ಜಾರಿಗೆ ತಂದಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ನಾವೇ ಶೂ ಮತ್ತು ಸಾಕ್ಸ್ ಗಳನ್ನು ವಿತರಿಸುತ್ತೇವೆ. ಇದು ಕರ್ನಾಟಕದ ಸ್ವಾಭಿಮಾನ, ಗೌರವ ಹಾಗೂ ಮಕ್ಕಳ ಬದುಕಿನ ವಿಚಾರ. ಇದರ ಜವಾಬ್ದಾರಿಯನ್ನು ನಾನು ಹೊರಲು ಸಿದ್ದನಿದ್ದೇನೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಕಾರ್ಯಕ್ರಮ ರೂಪಿಸಲು ಸಿದ್ದವಿದೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಶಿಕ್ಷಣ ಸಚಿವ ನಾಗೇಶ್ ಅವರು ಮಕ್ಕಳು ಶಾಲೆಗೆ ಹೋಗುವುದು ಪಾಠ ಕಲಿಯಲೇ ಹೊರತು ಶೂ ಹಾಕಿಕೊಳ್ಳಲು ಅಲ್ಲ ಎಂಬ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಶಿಕ್ಷಣ ಸಚಿವ ನಾಗೇಶ್ ಅವರ ಹೇಳಿಕೆಯಿಂದ ಇಡೀ ಕರ್ನಾಟಕ ರಾಜ್ಯವೇ ತಲೆತಗ್ಗಿಸುವಂತಾಗಿದೆ. ನಮ್ಮ ಮಕ್ಕಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಇಂದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಶಿಕ್ಷಣ ಸಚಿವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿದೆ. ಕೂಲಿ ಕಾರ್ಮಿಕರಿಂದ ಹಿಡಿದು ಚಾಲಕರವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಶ ಸಮವಸ್ತ್ರಗಳೊಂದಿಗೆ ಶಾಲೆಗೆ ಶಿಸ್ತಿನಿಂದ ಹೋಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಅವರು ಸಾಲಸೋಲ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಸರ್ಕಾರ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡುವ ಯೋಜನೆಯನ್ನು ಮೊದಲಿನಿಂದಲೂ ಜಾರಿಗೆ ತಂದಿದೆ. ಶಿಕ್ಷಣ ಸಚಿವರು ಉತ್ತಮ ಬಟ್ಟೆ ಹಾಕಿಕೊಂಡು ಓಡಾಡುವುದಿಲ್ಲವೇ? ಅವರು ಕೇವಲ ಚಡ್ಡಿ ಬನಿಯನ್ ನಲ್ಲೇ ಓಡಾಡಬಹುದಲ್ಲವೇ? ಅವರು ವಿಧಾನಸೌಧಕ್ಕೂ ಹಾಗೆಯೇ ಬರಲಿ ಎಂದರು.
ಸಮವಸ್ತ್ರ ಸಕಾಲಕ್ಕೆ ಸಿಗದಿರುವುದು ಪರಂಪರೆಯಾಗಿದೆ. ಸರ್ಕಾರ ಶಾಲಾ ಮಕ್ಕಳ ಪರವಾಗಿ ಕೆಲಸ ಮಾಡದಿದ್ದರೆ, ರಾಜ್ಯದ ಜನ ಹಾಗೂ ಕಾಂಗ್ರೆಸ್ ಪಕ್ಷದವರು ಮಕ್ಕಳ ಪರವಾಗಿ ಕೆಲಸ ಮಾಡಲಿದ್ದಾರೆ. ನಾಗೇಶ್ ಅವರ ಹೇಳಿಕೆ ಗೌರವ ರುವಂಥದಲ್ಲ. ಇದು ಬರೀ ಹಣದ ವಿಚಾರ ಮಾತ್ರವಲ್ಲ. ಇವರು ಸರ್ಕಾರಿ ಶಾಲಾ ಮಕ್ಕಳನ್ನು ಎಷ್ಟು ಅಗೌರವದಿಂದ ಕಾಣುತ್ತಿದ್ದಾಋಎ ಎಂದು ತಿಳಿಯುತ್ತದೆ ಎಂದು ಹೇಳಿದರು.
ನಿಮ್ಮ ಭಷ್ಟ್ರಾಚಾರ ಮುಚ್ಚಿಕೊಳ್ಳಲು ಬೇರೆ ನೀತಿ ತರುತ್ತಿದ್ದೀರಿ. ಇಷ್ಟು ದಿನ ಪಠ್ಯಪುಸ್ತಕ ಹೆಸರಿನಲ್ಲಿ ರಂಪಾಟ ಮಾಡಿದಿರಿ. ಎಲ್ಲಾ ಸಮಾಜದವರಿಗೂ ಅಗೌಋವ ತೋರಿ ನೋವು ಕೊಟ್ಟಿದ್ದೀರಿ. ಅಂಬೇಡ್ಕರ್, ಬುದ್ದ, ಬಸವ ಕುವೆಂಪು ಅವರಿಗೆ ಅಪಮಾನ ಮಾಡಿ ಎಲ್ಲರ ಮನಸ್ಸಿಗೂ ಗಾಯ ಮಾಡಿದ್ದೀರಿ ಎಂದು ಟೀಕಿಸಿದರು.
ಈಗ ಶಾಲಾ ಮಕ್ಕಳ ಶೂ, ಸಾಕ್ಸ್ ವಿಚಾರದಲ್ಲೂ ಇಂತಹ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದು ಮಾನವೀಯತೆಗೆ ಮಾಡಿರುವ ಅಪಮಾನ. ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಿಸಲು ಕಾಂಗ್ರೆಸ್ ಪಕ್ಷದಿಂದಲೇ ಒಂದು ಕಾರ್ಯಕ್ರಮ ರೂಪಿಸುತ್ತೇವೆ. ಎಲ್ಲಾ ಕಾರ್ಯಕರ್ತರು ತಮ್ಮ ತಾಲೂಕುಗಳಲ್ಲಿ ದೇಣಿಗೆ ಎತ್ತಿ ಮಕ್ಕಳಿಗೆ ಶೂ, ಸಾಕ್ಸ್ ನೀಡಲಿ, ನಮ್ಮ ಈ ಕಾರ್ಯಕ್ರಮಕ್ಕೆ ಕಾರ್ಪೋರೇಟ್ ಸಂಸ್ಥೆಗಳು ಕೂಡ ತಮ್ಮ ನೆರವಿನ ಹಸ್ತ ಚಾಚಬಹುದು ಎಂದು ಸಲಹೆ ಮಾಡಿದರು.


