ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನಿರಂತರವಾಗಿ ತಾರತಮ್ಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ಈ ತಾರತಮ್ಯವನ್ನು ಸರಿಪಡಿಸಬೇಕು ಇಲ್ಲವೇ ಸಮಗ್ರ ಬೆಂಗಳೂರು ಅಭಿವೃದ್ಧಿ ಎಂದು ಹೇಳಿಕೊಳ್ಳುವ ಬದಲು ಬಿಜೆಪಿ ಶಾಸಕರ ಕ್ಷೇತ್ರದ ಅಭಿವೃದ್ಧಿ ಎಂದು ಹೇಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತಾರೂಢ ಶಾಸಕರ 15 ಕ್ಷೇತ್ರಗಳಿಗೆ 9888 ಕೋಟಿ ರೂಗಳಷ್ಟು ಅನುದಾನ ನೀಡಿದೆ. ಕಾಂಗ್ರೆಸ್ ಶಾಸಕರ 12 ಕ್ಷೇತ್ರಗಳಿಗೆ 2,186.48 ಕೋಟಿ ರೂಪಾಯಿ ನೀಡಿದೆ. ಜೆಡಿಎಸ್ ಶಾಸಕರಿರುವ ದಾಸಹರಳ್ಳಿಗೆ 288.5 ಕೋಟಿ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ 5 ಪಟ್ಟು ಹೆಚ್ಚಿನ ಅನುದಾನವನ್ನು ಬಿಜೆಪಿಯವರಿಗೆ ನೀಡಲಾಗಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಂಗಳೂರಿಗೆ 7,200 ಕೋಟಿ, ಸಮ್ಮಿಶ್ರ ಸರ್ಕಾರದಲ್ಲಿ 1 ಸಾವಿರ ಕೋಟಿ ಹಣವನ್ನು ವಿವಿಧ ಕ್ಷೇತ್ರಗಳಿಗೆ ಅನುದಾನವಾಗಿ ನೀಡಿತ್ತು.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಡಲಾಗಿದ್ದ ಅನುದಾವನ್ನು ಹಿಂಪಡೆದು ಮುಖ್ಯಮಂತ್ರಿಗಳ ನಗರೊತ್ಥಾನ ಮರುಹಂಚಿಕೆ ಮಾಡಲಾಗಿದೆ. ಅಮೃತ್ ನಗರ ಯೋಜನೆ ಅಡಿಯಲ್ಲಿ 3600 ಕೋಟಿ ಕೊಟ್ಟಿದ್ದಾರೆ. 1500 ಕೋಟಿಯನ್ನು ಮಳೆ ನೀರುಗಾಲುವೆಗಾಗಿ ನೀಡಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರ ಸಮಗ್ರ ಬೆಂಗಳೂರು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿ ಈ ರೀತಿ ಅನುದಾನದಲ್ಲಿ ತಾರತಮ್ಯ ಮಾಡಿದರೆ ಬೆಂಗಳೂರು ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ? ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಯಾರೂ ಕೂಡ ಅದಾನ ಕಡಿಮೆಯಾಗಿದೆ ಎಂದು ಹೇಳಿರಲಿಲ್ಲ ಎಂದರು.


