ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಕಂಡ ಒಂದು ದಿನದ ಬಳಿಕ ಕಾಂಗ್ರೆಸ್ ನ ಹಿರಿಯ ಭಿನ್ನಮತೀಯ ನಾಯಕರು ಶುಕ್ರವಾರ ಸಂಜೆ ದೆಹಲಿಯಲ್ಲಿ ಗುಲಾಂ ನಭಿ ಅಜಾದ್ ಅವರ ಮನೆಯಲ್ಲಿ ಸೇರಿ ಸಭೆ ನಡೆಸಿದ್ದಾರೆ.
ಕೇಂದ್ರದ ಮಾಜಿ ಸಚಿವರಾದ ಕಪಿಲ್ ಸಿಬಲ್, ಮನೀಶ್ ತಿವಾರಿ ಸೇರಿದಂತೆ ಹಲವು ನಾಯಕರು ಅಜಾದ್ ಅವರ ನಿವಾಸದಲ್ಲಿ ಕರೆದಿದ್ದ ಸಭೆಗೆ ಆಗಮಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಹಿರಿಯ ನಾಯಕ ಆನಂದ್ ಶರ್ಮಾ ಕೂಡ ಚರ್ಚೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.
ನಾಲ್ವರೂ ಜಿ-23 ಅಥವಾ 23 ಭಿನ್ನಮತೀಯ ನಾಯಕರ ಭಾಗವಾಗಿದ್ದಾರೆ. ಎರಡು ವರ್ಷಗಳ ಹಿಂದೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಪೂರ್ಣ ಸಮಯದ ನಾಯಕತ್ವಕ್ಕೆ ಕರೆ ನೀಡಿದ್ದರು. ಹೀಗಿದ್ದರೂ ತರಾತುರಿಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು.
ಐದು ರಾಜ್ಯಗಳಲ್ಲಿ ಕಾಂಗ್ರೆಸ್ ನಿರೀಕ್ಷಿಸಿದ್ದ ಫಲಿತಾಂಶಕ್ಕೆ ವಿರುದ್ಧವಾಗಿ ಬಂದಿದೆ. ಹೀನಾಯ ಸೋಲು ಕಂಡ ನಂತರ ಮತ್ತೆ ಜಿ.23 ಭಿನ್ನಮತೀಯರು ಸಭೆ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭಾರತದ ಅತ್ಯಂತ ರಾಜಕೀಯವಾಗಿ ಪ್ರಮುಖ ರಾಜ್ಯವಾದ ಉತ್ತರ ಪ್ರದೇಶದಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಹೈ-ವೋಲ್ಟೇಜ್ ಪ್ರಚಾರದ ಹೊರತಾಗಿಯೂ ಕಾಂಗ್ರೆಸ್ ಯಾವುದೇ ಪರಿಣಾಮ ಬೀರಲು ವಿಫಲವಾಗಿದೆ. ಹಾಗಾಗಿ ಪಕ್ಷದ ಅವನತಿ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗಾಗಿ ಪಕ್ಷದೊಳಗೆ ಚಟುವಟಿಕೆಗಳು ಮತ್ತೆ ಗರಿಗೆದರಿವೆ.
ಭಿನ್ನಮತೀಯ ನಾಯಕರಲ್ಲಿ ಒಬ್ಬರಾದ ಶಶಿ ತರೂರ್ ಬದಲಾವಣೆ ಅನಿವಾರ್ಯ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅನ್ನು ನಂಬಿರುವ ನಾವೆಲ್ಲರೂ ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶಗಳಿಂದ ಬೇಸರವಾಗಿದೆ. ಕಾಂಗ್ರೆಸ್ ನ ಭಾರತದ ಕಲ್ಪನೆ ಮತ್ತು ರಾಷ್ಟ್ರಕ್ಕೆ ಅದು ನೀಡುವ ಸಕಾರಾತ್ಮಕ ಕಾರ್ಯಸೂಚಿಯನ್ನು ಪುನರುಚ್ಚರಿಸಲು ಮತ್ತು ನಮ್ಮ ಸಾಂಸ್ಥಿಕ ನಾಯಕತ್ವವನ್ನು ಸುಧಾರಿಸಲು ಇದು ಸಮಯವಾಗಿದೆ ಎಂದು ಹೇಳಿದ್ದಾರೆ.
ಆ ವಿಚಾರಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಜನರನ್ನು ಪ್ರೇರೇಪಿಸುವ ವಿಧಾನ. ಒಂದು ವಿಷಯ ಸ್ಪಷ್ಟವಾಗಿದೆ – ನಾವು ಯಶಸ್ವಿಯಾಗಬೇಕಾದರೆ ಬದಲಾವಣೆಯು ಅನಿವಾರ್ಯವಾಗಿದೆ ಎಂದು ತರೂರ್ ಬರೆದಿದ್ದಾರೆ.


