ದೆಹಲಿಯ ಸಂಘು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ 45 ವರ್ಷದ ರೈತರೊಬ್ಬರ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರೈತನನ್ನು ಫತೇಘರ್ ಸಾಹಿಬ್ ಜಿಲ್ಲೆಯ ರೂರ್ಕಿ ಗ್ರಾಮದ ಅಮ್ಲೋಹ್ ತಹಸಿಲ್ ನ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತ ರೈತ ಭಾರತೀಯ ಕಿಸಾನ್ ಯೂನಿಯನ್ ಏಕ್ತಾ ಸಿಧುಪುರ್ ಜೊತೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಇದು ಆತ್ಮಹತ್ಯೆಯಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಸೋನಿಪತ್ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ವರಿಷ್ಠಾಧಿಕಾರಿ ವೀರೇಂದ್ರ ಸಿಂಗ್ ತಿಳಿಸಿದ್ದಾರೆ.
ಬೆಳಗ್ಗೆ 6 ಗಂಟೆಯ ಸುಮಾರಿಗೆ ಬಿಕೆಯು ಏಕ್ತಾ ಸಿಧುಪರ್ ಜಿಲ್ಲಾ ಸಂಚಾಲಕರಿಗೆ ಮಾಹಿತಿ ನೀಡಿದ್ದು ರೈತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.
ಸೋಮವಾರ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ ನಂತರ ಗುರುಪ್ರೀತ್ ಸಿಂಗ್ ಸಿಂಘು ಗಡಿ ಪ್ರದೇಶಕ್ಕೆ ಮರಳಿದ್ದರು. ಕಳೆದ ಎರಡು ದಿನಗಳಿಂದ ರೈತರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಕೃಷಿ ಕಾನೂನುಗಳಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಮತ್ತು ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಬೇಡಿಕೆಗಳನ್ನು ಅಲಿಸಿಲ್ಲ ಎಂದು ಹೇಳಿದ್ದರು.
ಪಂಜಾಬ್ ಬಿಕೆಯು ಏಕ್ತಾ ಸಿಧುಪುರ್ ರಾಜ್ಯಾಧ್ಯಕ್ಷ ಜಗ್ಬಿತ್ ಸಿಂಗ್ ದಲ್ಲೆವಾಲ್ ” ಗುರುಪ್ರೀತ್ ಸಿಂಗ್ ಆಂದೋಲನ ಆರಂಭವಾದ ದಿನದಿಂದಲೂ ಒಕ್ಕೂಟದೊಂದಗೆ ಸಂಬಂಧ ಹೊಂದಿದ್ದರು. ಮೋರ್ಚಾ ಸಭೆಗಳಲ್ಲಿ ಸ್ವಯಂಸೇವಕರಾಗಿ ನಿರ್ವಹಿಸುತ್ತಿದ್ದರು. ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಕಳೆದ ವರ್ಷದಿಂದ ಸಿಂಘು ಗಡಿಯಲ್ಲಿ ಬಿಡಾರ ಹೂಡಿದ್ದರು. ಅವರು ಸ್ವಲ್ಪ ಜಮೀನು ಹೊಂದಿದ್ದರು. ಜೀವನ ನಡೆಸಲು ಶಾಲಾ ವ್ಯಾನ್ ಓಡಿಸುತ್ತಿದ್ದರು. ಅವರ ಸಾವು ದುರದೃಷ್ಟಕರ ಘಟನೆ. ಆದ್ದರಿಂದ ಸರ್ಕಾರ ಕೂಡಲೇ ಕರಾಳ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.


