ತೃಣಮೂಲ ಕಾಂಗ್ರೆಸ್ ಸಂಸದೆ ಸುಸ್ಮಿತ ದೇವ್ ಅವರನ್ನು ಕಾರನ್ನು ಜಖಂಗೊಳಿಸಲಾಗಿದೆ. ಸುಸ್ಮಿತದೇವ್ ಸೇರಿದಂತೆ 5ಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರ ಮೇಲೆ ದೈಹಿಕ ಹಲ್ಲೆ ನಡೆಸಿರುವ ಘಟನೆ ತ್ರಿಪುರದಲ್ಲಿ ನಡೆದಿದೆ. ದಾಳಿಗೆ ಬಿಜೆಪಿಯೇ ನೇರ ಹೊಣೆ ಎಂದು ಟಿಎಂಸಿ ಆರೋಪಿಸಿದೆ.
ಟಿಎಂಸಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರನ್ನು ಅಡ್ಡಗಟ್ಟಿದೆ ಗುಂಪೊಂದು ಸುಸ್ಮಿತ ದೇವ್ ಮತ್ತು ಇತರೆ ಮಹಿಳಾ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ ಸದಸ್ಯರು ಸುಸ್ಮಿತದೇವ್ ಅವರನ್ನು ಬಚಾವ್ ಮಾಡಿದರೆಂದು ಹೇಳಲಾಗಿದೆ. ರಾಜಕೀಯ ಸಾರ್ವಜನಿಕ ಸಂಪರ್ಕ ಸಂಸ್ಥೆಯಾದ ಐಪ್ಯಾಕ್ ಮುಖ್ಯಸ್ಥ ಹಾಗೂ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮಮತಾ ಬ್ಯಾನರ್ಜಿ ಪರವಾಗಿ ಕಳೆದ ಚುನಾವಣೆಯಲ್ಲಿ ಕೆಲಸ ಮಾಡಿದ್ದರು.
ನೀಲಿ ಬಣ್ಣದ ಎಸ್.ಯುವಿ ವಾಹನವನ್ನು ಜಖಂಗೊಳಿಸಲಾಗಿದೆ. ದಾಳಿಯಲ್ಲಿ ಬಹುತೇಕ ಮಹಿಳಾ ಕಾರ್ಯಕರ್ತರೇ ಗಾಯಗೊಂಡಿದ್ದಾರೆ. ಅಮ್ತಾಲಿ ಬಜಾರ್ ನಲ್ಲಿ ಪ್ರಚಾರ ನಡೆಸುತ್ತಿದ್ದಾಗ ಮಧ್ಯಾಹ್ನ 1.30ರ ಸಮಯದಲ್ಲಿ ದಾಳಿ ನಡೆಸಲಾಗಿದೆ.
ಮಹಿಳಾ ಕಾರ್ಯಕರ್ತರ ಬಳಿ ಇದ್ದ ಮೊಬೈಲ್ ಗಳನ್ನು ಕಳವು ಮಾಡಿದ್ದು ಘಟನೆ ಬಗ್ಗೆ ತನಿಖೆ ನಡೆಸುವಂತೆ ಟಿಎಂಸಿ ಒತ್ತಾಯಿಸಿದೆ.
ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮುಂಬರುವ ಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಸಿದ್ದತೆ ನಡೆಯುತ್ತಿದೆ. 10-12 ತಂಡಗಳು ತ್ರಿಪುರದ 60 ಕ್ಷೇತ್ರಗಳಲ್ಲಿ, ಎಂಟು ಜಿಲ್ಲೆಗಳ 58 ಬ್ಲಾಕ್ ಗಳಲ್ಲಿ ಜನರ ಬಳಿಗೆ ಹೋಗುತ್ತೇವೆ. ಚರ್ಚೆ ನಡೆಸುತ್ತೇವೆ. ಅವರ ಸಮಸ್ಯೆಗಳನ್ನು ಆಲಿಸುತ್ತೇವೆ. ಪ್ರಚಾರ ನಡೆಸುತ್ತೇವೆ ಎಂದು ಟಿಎಂಸಿ ಹೇಳಿದೆ.