ದೇಶದಲ್ಲಿ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ನಿವಾಸದ ಸಮೀಪ ಅಕ್ಬರ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಸಚಿವ ಹರದೀಪ್ ಸಿಂಗ್ ಪುರಿ ನಿವಾಸದ ಕಡೆಗೆ ಪ್ರತಿಭಟನಾಕಾರರು ತೆರಳಲು ಮುಂದಾಗುತ್ತಿದ್ದಂತೆಯೇ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಯುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೆಟ್ರೋಲಿಯಂ ಸಚಿವರ ವಿರುದ್ಧವೂ ಧಿಕ್ಕಾರ ಹಾಕಿದರು.
ಶನಿವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರು ಕಷ್ಟ ಅನುಭವಿಸುವಂತೆ ಆಗಿದೆ. ಇದನ್ನು ಖಂಡಿಸಿ ಪ್ರತಿಭಟನೆ ಸಡೆಸುತ್ತಿದ್ದ ನಮ್ಮನ್ನು ಪೊಲೀಸರು ತಡೆದರು ಎಂದು ಯುವ ಕಾಂಗ್ರೆಸ್ ಮುಖಂಡ ರಾಹುಲ್ ರಾವ್ ತಿಳಿಸಿದ್ದಾರೆ.
ಶನಿವಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹೆಚ್ಚಳವಾಗಿದ್ದು ದೇಶದಲ್ಲಿ ಹೊಸ ದಾಖಲೆ ಬರೆದಿದೆ. ಎಲ್ಲಾ ರಾಜ್ಯಗಳ ರಾಜಧಾನಿ ಯಲ್ಲೂ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಡೀಸೆಲ್ ಬೆಲೆ 100 ರೂಪಾಯಿಗೆ ಏರಿಕೆಯಾಗಿದೆ. ಇದು 12 ರಾಜ್ಯಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಒಂದು ಲೀಟರ್ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 105.49 ರೂ ಇದೆ. ಮುಂಬೈನಲ್ಲಿ 111.43ಕ್ಕೆ ಏರಿದೆ ಎಂದು ರಾಜ್ಯ ಮಾಲಿಕತ್ವದ ತೈಲ ಕಂಪನಿಗಳು ಅಧಿಸೂಚನೆಯಲ್ಲಿ ತಿಳಿಸಿವೆ.
ಮುಂಬೈನಲ್ಲಿ ಲೀಟರ್ ಡೀಸೆಲ್ ಬೆಲೆ 102.15ರೂ ಆಗಿದೆ. ದೆಹಲಿಯಲ್ಲಿ 94.22 ರೂ ಇದೆ. ನಿರಂತರ ಮೂರನೇ ದಿನವೂ 35 ಪೈಸೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು ಕೂಡಲೇ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.