ಪಿಕ್ ನಿಕ್ ನಿಂದ ಹಿಂದಿರುಗುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಐವರು ಭಜರಂಗದಳ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರೀತಂಶೆಟ್ಟಿ, ಅರ್ಶಿತ್, ಶ್ರೀನಿವಾಸ್, ರಾಕೇಶ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ.
ಈ ಐವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 341, 323 ಮತ್ತು 504 ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ಕರಾವಳಿಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿಯ 5ನೇ ಪ್ರಕರಣ ಇದಾಗಿದೆ ಎಂದು ಮಾಧ್ಯಮಗಳು ತಿಳಿಸಿವೆ.
ಭಾನುವಾರ ದ್ವಿತೀಯ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಆರು ಮಂದಿ ವಿದ್ಯಾರ್ಥಿಗಳು ಮಲ್ಪೆ ಬೀಚ್ ನಿಂದ ಹಿಂದಿರುಗುತ್ತಿದ್ದರು. ಸೂರತ್ಕಲ್ ಚೆಕ್ ಪೋಸ್ಟ್ ಬಳಿ ಆರೋಪಿಗಳು ವೈದ್ಯಕೀಯ ವಿದ್ಯಾರ್ಥಿಗಳು ಬರುತ್ತಿದ್ದ ಕಾರು ತಡೆದರು. ಕಾರಿನಲ್ಲಿದ್ದವರ ಹೆಸರು ಕೇಳಿ, ಪ್ರಶ್ನಿಸಿದರು ಎಂದು ಹೇಳಲಾಗಿದೆ.
ಪಿಕ್ ನಿಕ್ ನಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿಗಳನ್ನು ಭಜರಂಗದಳ ಕಾರ್ಯಕರ್ತರು ಪ್ರಶ್ನಿಸಿ ನಂತರ ಹಿಂಸೆ ನೀಡಿ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಮಂಗಳೂರು ಪೊಲೀಸ್ ವರಿಷ್ಠ ಶಶಿಕುಮಾರ್ ತಿಳಿಸಿದ್ದಾರೆ.
ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು ಇದು ಐದನೇ ಪ್ರಕರಣವಾಗಿದೆ. ಬೆಂಗಳೂರು ಮೂಲದ ಮಹಿಳೆಯೊಬ್ಬರು ತನ್ನ ಸ್ನೇಹಿತರೊಂದಿಗೆ ಹೋಗುತ್ತಿದ್ದಾಗ ಪುತ್ತೂರು ಬಳಿ ದಾಳಿ ನಡೆಸಲಾಗಿತ್ತು. ಮುಸ್ಲಿಂ ಮಹಿಳೆ ಮತ್ತು ಹಿಂದೂ ಪುರುಷ ಇಬ್ಬರು ಸ್ನೇಹಿತರು. ಅವರು ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ದಾಳಿ ನಡೆಸಿದ್ದರು.


