ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕ್ವಿಂಟಾಲ್ ಕಬ್ಬಿನ ಖರೀದಿ ಬೆಲೆ 25 ರೂ ಹೆಚ್ಚಳ ಮಾಡಿದ ಬೆನ್ನಲ್ಲೇ ಬಿಜೆಪಿಯಲ್ಲಿ ಟೀಕೆಗಳು ಕೂಡ ವ್ಯಕ್ತವಾಗಿದೆ. ಮುಖ್ಯಮಂತ್ರಿಗೆ ಪತ್ರ ಬರೆದಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಆದಿತ್ಯನಾಥ್ ಕೇವಲ 25 ರೂ ಹೆಚ್ಚಳ ಮಾಡಿರುವುದು ತೃಪ್ತಿದಾಯಕವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕ್ವಿಂಟಾಲ್ ಕಬ್ಬಿಗೆ 25 ರೂ ಖರೀದಿ ಬೆಲೆ ಹೆಚ್ಚಳ ಮಾಡಿದ್ದರಿಂದ 350 ರೂಪಾಯಿ ಆಗಿದೆ. ಕನಿಷ್ಠ ಖರೀದಿ ಬೆಲೆಯನ್ನು 400 ರೂಪಾಯಿಗೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆದಿತ್ಯನಾಥ್ ಬೆಲೆ ಹೆಚ್ಚಿಸಬೇಕು. ಈಗ ಹೆಚ್ಚಿಸಿರುವ ಬೆಲೆ ತೃಪ್ತಿ ತರುತ್ತಿಲ್ಲ ಎಂದು ಹೇಳಿದ್ದಾರೆ.
ಆರ್ಥಿಕ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ತಾವು ಬೆಳೆಯುವ ಬೆಳೆಗೆ ಖರ್ಚು ದ್ವಿಗುಣವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಬೀಜ, ಗೊಬ್ಬರ ಮತ್ತು ವಿದ್ಯುತ್ ಬೆಲೆ ಹೆಚ್ಚಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದು ಮತ್ತಷ್ಟು ಬೆಲೆ ಹೆಚ್ಚಿಸಬೇಕೆಂದು ಸಲಹೆ ನೀಡಿದ್ದಾರೆ.
ಮೂರು ಬಾರಿ ಸಂಸದರಾಗಿರುವ ವರುಣ್ ಗಾಂಧಿ ಕ್ವಿಂಟಾಲ್ ಕಬ್ಬಿಗೆ ಕನಿಷ್ಠ 400 ರೂ ದರ ನಿಗದಿ ಮಾಡಬೇಕು. ಇದರಿಂದ ಸಂಕಷ್ಟದಲ್ಲಿರುವ ಲಕ್ಷಾಂತರ ಮಂದಿ ರೈತರು ಮತ್ತು ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಭಾರತ್ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಉತ್ತರ ಪ್ರದೇಶ ಸರ್ಕಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಬ್ಬಿನ ಬೆಲೆ ಹೆಚ್ಚಳ ಮಾಡಿದೆ. ಇದು ಕೇವಲ ಗಿಮಿಕ್ ಎಂದು ಟೀಕಿಸಿದ್ದಾರೆ.