ಸೇನಾ ಹೆಲಿಕಾಪ್ಟರ್ ರಭಸವಾಗಿ ಭೂಮಿಗೆ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಪೈಲಟ್ ಗಳು ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಉದಂಪುರ ಜಿಲ್ಲೆಯ ಪಟ್ನಿಟಾಪ್ ನಲ್ಲಿ ಸಂಭವಿಸಿದೆ.
ಇಂದು ಮಧ್ಯಾಹ್ನ 1.30 ರಿಂದ 1.45 ಗಂಟೆ ಸಮಾರಿನಲ್ಲಿ ಶಿವಗರಧರ್ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಭೂಮಿಗೆ ಅಪ್ಪಳಿಸಿದೆ. ಅದರಲ್ಲಿದ್ದ ಇಬ್ಬರು ಪೈಲಟ್ ಗಳು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಆ ಇಬ್ಬರು ಪೈಲಟ್ ಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಗರಧರ್ ಪ್ರದೇಶ ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಅಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು ರೋಹಿತ್ ಕುಮಾರ್ ಮತ್ತು ಅನುಜ್ ರಜಪೂತ್ ಸಾವನ್ನಪ್ಪಿದ್ದಾರೆ. ಈ ಇಬ್ಬರು ಮೇಜರ್ ದರ್ಜೆಯ ಅಧಿಕಾರಿಗಳಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 7 ವಾರಗಳಲ್ಲಿ ನಡೆದ ಹೆಲಿಕಾಪ್ಟರ್ ಪತನದ ಎರಡನೇ ಘಟನೆ ಇದಾಗಿದೆ. ಕಳೆದ ತಿಂಗಳು ರಂಜಿತ್ ಸಾಗರ್ ಡ್ಯಾಂ ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿತ್ತು. ಇಬ್ಬರು ಪೈಲಟ್ ಗಳಲ್ಲಿ ಒಬ್ಬರ ಮೃತದೇಹವನ್ನು ಮಾತ್ರ ಸಿಕ್ಕಿತ್ತು. ಮತ್ತೊಬ್ಬ ಪೈಲಟ್ ಮೃತದೇಹ ಇದುವರೆಗೂ ದೊರೆತಿಲ್ಲ.
ಹೆಲಿಕಾಪ್ಟರ್ ಪತನದಲ್ಲಿ ಮೃತರಾದ ಇಬ್ಬರು ಪೈಲಟ್ ಗಳಿಗೆ ಭಾರತೀಯ ಸೇನೆಯ ಉತ್ತರ ಕಮಾಂಡ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.