ಕೃಷ್ಣ ನಮ್ಮ ಕರ್ನಾಟಕದ ಅಸ್ಮಿತೆಯೇನಲ್ಲ. ಲಾಗಾಯ್ತಿನಿಂದಲೂ ಕಾವೇರಿ ಕರ್ನಾಟಕದ ಜೀವನಾಡಿ ; ಜೀವನದಿ. ಜಲ ಮೂಲದ ಮೂಲಕ ಒಂದು ಪ್ರದೇಶವನ್ನು ಗುರುತಿಸಿರುವುದು ಕರ್ನಾಟಕವೇ. ಕ್ರಿ.ಶ. 850 ರಲ್ಲಿಯೇ ಶ್ರೀವಿಜಯನ ಕವಿರಾಜಮಾರ್ಗ “ಕಾವೇರಿಯಿಂದಮಾ ” ಎಂದು ಲೋಕಕ್ಕೆಲ್ಲ ಹೇಳಿ ಕನ್ನಡದ ಚಹರೆಯನ್ನು ಕಟ್ಟಿಕೊಟ್ಟಿದ್ದಾನೆ. ಕಾವೇರಿಗೆ ಅಷ್ಟೊಂದು ಮಹತ್ವದ ಐತಿಹಾಸಿಕ ಹಿನ್ನೆಲೆಯಿದೆ. ಹೀಗಿದ್ದರೂ ಎನ್ ಸಿಇಆರ್ ಟಿ ರಚಿಸಿರುವ ಪಠ್ಯದಲ್ಲಿ ಕನ್ನಡತನವೇ ಕಾಣೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಎನ್ ಸಿ ಇ ಆರ್ ಟಿ ಸಿಬಿಎಸ್ಇ ಶಾಲೆಗಳಿಗೆ ಕನ್ನಡವನ್ನು R3 ಯಾಗಿ ಕಲಿಸಲು ಪ್ರಕಟಿಸಿರುವ ಕನ್ನಡ ಪುಸ್ತಕಕ್ಕೆ “ಕೃಷ್ಣ” ಎಂದು ಹೆಸರಿಸಿರುವುದು ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಹಿಂಬಾಗಿಲಿನಿಂದ ಜಾರಿಗೊಳಿಸುವ ದೊಡ್ಡ ಕುತಂತ್ರ ಹಾಗೂ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.
ಕೃಷ್ಣ ಎಂದರೆ ಅವರ ದೃಷ್ಟಿಯಲ್ಲಿ ಜಲವೇನಲ್ಲ. ಅವರ ಕಲ್ಪನೆಯ ದೈವ ಹಾಗೂ ಪುಸ್ತಕ ರಚಿಸಲು ಜವಾಬ್ದಾರಿ ಹೊತ್ತಿದ್ದ ಗುರೂಜಿಯೊಬ್ಬರ ಆರಾಧ್ಯ ದೈವ. ಆದರೆ ಕಾವೇರಿ ಇಲ್ಲಿನ ಜನರ ಜೀವನಾಡಿ. ಕಾವೇರಿ ಎಂದರೆ “ಕಾಪಾಡುವ ನೀರು” (ಕಾವ್+ಏರಿ) ಹೀಗೆ ನಂಬಿಕೊಂಡಿರುವ ಕರ್ನಾಟಕಕ್ಕೆ ಕನ್ನಡ ಜನತೆಗೆ ಎನ್ ಸಿ ಇ ಆರ್ ಟಿ “ಕೃಷ್ಣ” ಎಂದು ಹೆಸರಿಟ್ಟು ಕನ್ನಡಿಗರನ್ನು ಅವಮಾನಿಸಿದೆ. ಕನ್ನಡದ ಸಾಂಸ್ಕೃತಿಕ ಚರಿತ್ರೆಯ ಅರಿವಿಲ್ಲದವರು ಮಾತ್ರ ಇಂತಹ ದ್ರೋಹ ಬಗೆಯಲು ಸಾಧ್ಯ ಎಂದಿದ್ದಾರೆ.
ಈ ಪಠ್ಯವನ್ನು ಹಿಂಪಡೆದು ಕನ್ನಡದ ಅಸ್ಮಿತೆಯನ್ನು ಉಳಿಸಬಹುದಾದ ಪಠ್ಯವನ್ನು ಮರು ಜಾರಿ ಮಾಡಬೇಕೆಂದು ಹಾಗೂ ಪಠ್ಯದೊಳಗೆ ಇರುವ ವಿಷಯಗಳು ಕರ್ನಾಟಕದ ಅಸ್ಮಿತೆಯಿಂದ ಹೊರಗಿವೆ. ಋಷಿ ಪರಂಪರೆ, ಪುರುಷನೆಲೆ, ಆಧ್ಯಾತ್ಮದ ಹೆಸರಿನಲ್ಲಿ ಏಕಧರ್ಮದ ಆರಾಧನೆ, ತಳಸಮುದಾಯಗಳ ಪರಂಪರೆ ಆಚರಣೆಯ ಬಗೆಗೆ ವ್ಯಂಗ್ಯ.ಇತ್ಯಾದಿಗಳಿಂದ ಈ ಪಠ್ಯ ಕನ್ನಡ ಜನಸಮುದಾಯದ ವಿರೋಧಿಯಾಗಿದೆ ಎಂದು ಪ್ರಾಧಿಕಾರದ ಅಭ್ಯಕ್ಷರು ಮತ್ತು ಸದಸ್ಯರು ಹೇಳಿದ್ದಾರೆ.
ಈಗಾಗಲೇ ಕರ್ನಾಟಕದ ಸಾಂಸ್ಕೃತಿಕ ಚಾರಿತ್ರಿಕ ಐತಿಹಾಸಿಕ ಮಹತ್ವವನ್ನು ಅರಿತಿರುವ ಸಂಪನ್ಮೂಲ ವ್ಯಕ್ತಿಗಳು 1ರಿಂದ 10ನೇ ತರಗತಿವರೆಗೆ ಕನ್ನಡದ ಪಠ್ಯನ್ನು ಪ್ರಥಮ, ದ್ವಿತೀಯ, ತೃತೀಯ ಭಾಷೆಯಾಗಿ ಕಲಿಸಲು ಸಿದ್ಧಪಡಿಸಿದ್ದಾರೆ. ಕನ್ನಡದ ನೆಲಕ್ಕೆ ಅನುಗುಣವಾಗಿ ರಚಿತವಾಗಿದೆ. ಜೊತೆಗೆ ಕನ್ನಡದ ಜನಜೀವನವನ್ನು, ಸಂಸ್ಕೃತಿಯನ್ನು, ಆಹಾರದ ನೆಲೆಗಳನ್ನು, ಆಚರಣೆಗಳನ್ನು, ಸ್ಥಳೀಯ ವೀರರನ್ನು, ಕರ್ನಾಟಕದ ವಿವಿಧ ಭಾಗಗಳ ಮೂಲಕ ಅಸ್ಮಿತೆಯನ್ನು ಗುರುತಿಸಿ ” ಸಿರಿಗನ್ನಡ” ಪಠ್ಯಗಳನ್ನಾಗಿಸಿದ್ದಾರೆ. ಆಹಾರ, ಉಡುಪು, ಆಚರಣೆ, ಬದುಕಿನ ಕ್ರಮಗಳನ್ನು ತಾರತಮ್ಯಗಳಿಲ್ಲದೆ ಬೋಧಿಸಲು ಈ ಪಠ್ಯಗಳು ನೆರವಾಗಿವೆ ಮತ್ತು ಕರ್ನಾಟಕತ್ವವನ್ನು ಒಳಗೊಂಡಿವೆ. ಈ ಪಠ್ಯಗಳನ್ನು ಮುಂದುವರಿಸಿ ಕನ್ನಡದ ಅಸ್ಮಿತೆಯನ್ನು ಉಳಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
ಎನ್ ಸಿ ಇ ಆರ್ ಟಿ ನೀಡಿರುವ ಸ್ಪಷ್ಟೀಕರಣಕ್ಕೂ ನಮ್ಮ ವಿರೋಧ:
ಎನ್ ಸಿ ಇ ಆರ್ ಟಿ ಹೇಳಿರುವುದು ಶುದ್ಧ ಸುಳ್ಳು ಮತ್ತು ವಿಷಯವನ್ನು ವಿಷಯಾಂತರ ಮಾಡುವ ತಿರುಚುವ ಸ್ಪಷ್ಟನೆ . ಎನ್ ಸಿ ಇ ಆರ್ ಟಿ ಒಂದು ಶೈಕ್ಷಣಿಕ ಪ್ರಾಧಿಕಾರವಾಗಿ ಈ ಮಟ್ಟಕ್ಕೆ ಇಳಿಯಬಾರದಿತ್ತು . ಕರ್ನಾಟಕ ಎಂದ ತಕ್ಷಣ ನಮಗೆ ನೆನಪಾಗುವುದು ಕಾವೇರಿ. ಈ ಎನ್ ಸಿ ಇ ಆರ್ ಟಿ ನಮಗೆ ನಮ್ಮ ನದಿಗಳ ಬಗ್ಗೆ ಏನನ್ನು ಹೇಳಲು ಹೊರಟಿದೆ? ಇದು ಕಿವಿಗೆ ಹೂ ಇಡುವ ಕೆಲಸ. ಜೊತೆಗೆ ನಮ್ಮ ನಮ್ಮ ಆಹಾರ ಸಂಸ್ಕೃತಿಗೆಅನುಗುಣವಾಗಿ ಸಮತೋಲನ ಆಹಾರ ವೆಂದರೆ ಮಾಂಸಹಾರವನ್ನು ಒಳಗೊಂಡಿರುತ್ತದೆ ಆದರೆ ಇದನ್ನು ಸ್ಪಷ್ಟವಾಗಿ ಎಲ್ಲೂ ಉಲ್ಲೇಖಿಸಿಯೂ ಇಲ್ಲ ಹೇಳೂ ಇಲ್ಲ . ಅವರು ಉಲ್ಲೇಖಿಸಿರುವ ಪುಟ 63 ರ ಚಿತ್ರದಲ್ಲಿ ಮುದ್ದೆ, ಸಾರು ,ಇಡ್ಲಿ ಚಟ್ನಿ ,ತರಕಾರಿ ಹಾಲು, ಮೊಟ್ಟೆ ಮತ್ತು ಪಕ್ಕದಲ್ಲಿ ಹಣ್ಣುಹಂಪಲು ಬಿಟ್ಟರೆ ಮೀನು, ಮಾಂಸ ಇತರೆ ಮಾಂಸಹಾರ ಪ್ರತಿನಿಧಿಸುವ ಚಿತ್ರ ಎಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ.
ಈ ಮಟ್ಟಕ್ಕೆ ಎನ್ ಸಿ ಇ ಆರ್ ಟಿ ಸುಳ್ಳು ಸ್ಪಷ್ಟನೆ ನೀಡುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಇದು ನಮಗೆ ಗಾಬರಿ ತರಿಸಿದೆ . ಎನ್ ಸಿ ಇ ಆರ್ ಟಿ ನಮ್ಮ ರಾಜ್ಯದ ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್ಇಆರ್ಟಿ ಯನ್ನು ಏಕೆ ಒಳಗು ಮಾಡಿಕೊಳ್ಳಲಿಲ್ಲ ಎಂದು ಹೇಳಬೇಕಿತ್ತು. ನಮ್ಮ ತಿಳಿ ಕನ್ನಡ , ನಲಿ ಕನ್ನಡ ಸಿರಿ ಕನ್ನಡ ಪುಸ್ತಕಗಳನ್ನು ಏಕೆ ಬಳಸುವುದಿಲ್ಲ ಎಂದು ಹೇಳಬೇಕಿತ್ತು .ಅದಾವುದನ್ನು ಹೇಳದೆ ಹಾರಿಕೆ ಉತ್ತರ ನೀಡಿರುವುದು ಖಂಡನೀಯ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆ, ಪ್ರೊ. ಎ. ಬಿ. ರಾಮಚಂದ್ರಪ್ಪ, ಡಾ.ನಿರಂಜನಾರಾಧ್ಯ ವಿ.ಪಿ., ಟಿ.ಗುರುರಾಜ್, ಡಾ. ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರುಪಾಕ್ಷಪ್ಪ ಕಲ್ಲೂರು, ಶ್ರೀ ಟಿ ತಿಮ್ಮೇಶ್ ಎಂದು ಹೇಳಿದರು.


