ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದರು.
ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ನೀಡಿರುವುದು ನನಗೆ ಗೌರವದ ಸಂಗತಿಯಷ್ಟೇ ಅಲ್ಲ, ಇನ್ನಷ್ಟು ಹೊಣೆಗಾರಿಕೆಯಿಂದ ಕೆಲಸ ಮಾಡುವ ಪ್ರೇರಣೆಯಾಗಿದೆ ಎಂದರು.
ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿ ತಮ್ಮ ಪ್ರೀತಿ, ವಿಶ್ವಾಸ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ ಪಕ್ಷದ ಎಲ್ಲಾ ಮುಖಂಡರು, ಜನಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಅಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತನ ಪರಿಶ್ರಮಕ್ಕೂ ನಾನು ಋಣಿಯಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸವೇ ನನ್ನ ಶಕ್ತಿ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಮತ್ತಷ್ಟು ಬಲಪಡಿಸಿ, ಸಂಘಟನೆಯನ್ನು ಗಟ್ಟಿಗೊಳಿಸಿ, ಜನರ ಆಶಯಗಳಿಗೆ ಸ್ಪಂದಿಸುವ ಪಕ್ಷವಾಗಿ ರೂಪಿಸಲು ನಿಮ್ಮೆಲ್ಲರ ಸಹಕಾರದೊಂದಿಗೆ ನಿರಂತರವಾಗಿ ಶ್ರಮಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದ ಧರ್ಮ ತ್ರಿವರ್ಣ ಧ್ವಜ, ನಮ್ಮ ಪವಿತ್ರ ಗ್ರಂಥ ಸಂವಿಧಾನ, ನಮ್ಮ ಜಾತಿ ಕಾಂಗ್ರೆಸ್ ಪಕ್ಷ. ನಮ್ಮ ದೇಶದಲ್ಲಿ ಅಧಿಕೃತ ಧರ್ಮವಿಲ್ಲ. ಎಲ್ಲಾ ಧರ್ಮಕ್ಕೂ ಸಮಾನ ಅವಕಾಶ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ನೀಡಿದ ಸಂವಿಧಾನ. ಹೂವಿನ ಹಾರ, ಶಾಲಿನ ಬದಲು ಅದೇ ಹಣ ಪಕ್ಷಕ್ಕೆ ನೀಡಿ. ಅದೇ ನೀವು ನನಗೆ ನೀಡವ ಕೊಡುಗೆ. ಬಿಜೆಪಿಯವರು ಧರ್ಮಾಧಾರಿತ ರಾಜಕೀಯ ಮಾಡಿಕೊಂಡು ಅಶಾಂತಿ ಸೃಷ್ಟಿ ಮಾಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಎಲ್ಲಾ ಶೋಷಿತರ ಪರವಾದ ಹೋರಾಟಗಳಿಗೆ ಕೈ ಜೋಡಿಸಬೇಕು. ನಾವು ಎಚ್ಚರ ತಪ್ಪಿದರೆ ನಿರ್ನಾಮ ಮಾಡಲು ವಿರೋಧಿಗಳು ಕಾಯುತ್ತಿದ್ದಾರೆ. ಧರ್ಮಾದಾರಿತ ರಾಜಕಾರಣ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದರು.
ಗೋಡ್ಸೆ ಈ ದೇಶದ ಮೊಟ್ಟಮೊದಲ ಭಯೋತ್ಪಾದಕ, ಆತ ಮಹಾತ್ಮ ಗಾಂಧಿಯವರನ್ನು ಕೊಂದ. ಆತ ದೊಡ್ಡ ಕೊಲೆಗಾರ ಅದನ್ನು ಸಾರ್ವಜನಿಕವಾಗಿ ಬಿಜೆಪಿಯವರು ಹೇಳಲ್ಲ ಎಂದ ಅವರು ಅಂಬೇಡ್ಕರ್ ಅವರು ಹೇಳುತ್ತಾರೆ, ಜೀವನ ಮಾಡೋದಕ್ಕೆ ರಾಜಕೀಯಕ್ಕೆ ಬರಬೇಡಿ, ರಾಜಕೀಯಕ್ಕೆ ಬಂದರೆ ದೀನ ದಲಿತರ ಜೀವನ ಬದಲಾವಣೆ ಮಾಡಲು ರಾಜಕೀಯಕ್ಕೆ ಬನ್ನಿ ಎಂದಿದ್ದಾರೆ.


