Monday, May 4, 2026
Google search engine
Homeಮುಖಪುಟಪಿಡಿಒಗಳಿಗೆ ಸೇವಾ ರಕ್ಷಣೆ ಒದಗಿಸಲು ಮನವಿ

ಪಿಡಿಒಗಳಿಗೆ ಸೇವಾ ರಕ್ಷಣೆ ಒದಗಿಸಲು ಮನವಿ

ರಾಜ್ಯದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಅಮಾನವೀಯ ಕೆಲಸದ ಒತ್ತಡ, ಬಾಕಿ ವೇತನ ಬಿಡುಗಡೆ ವಿಳಂಬ ಹಾಗೂ ಮಾನಸಿಕ ಕಿರುಕುಳದಿಂದಾಗಿ ಕೊತಬಾಲ ಗ್ರಾ.ಪಂ ಪಿಡಿಒ ಮುಕ್ತಂಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಹಾಗೂ ರಾಜ್ಯದ ಎಲ್ಲಾ ಪಿಡಿಒಗಳಿಗೆ ಸೇವಾ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ತುಮಕೂರು ಜಿಲ್ಲಾ ಘಟಕದ ವತಿಯಿಂದ ತುಮಕೂರು ಜಿ.ಪಂ. ಉಪಕಾರ್ಯದರ್ಶಿ (ಆಡಳಿತ) ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ತುಮಕೂರು ನಗರದ ಜಿ.ಪಂ. ಕಚೇರಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಆರ್. ಹಾಗೂ ಜಿಲ್ಲಾಧ್ಯಕ್ಷ ಸುಬ್ಬರಾಜ್ ಅರಸ್ ವಿ.ಆರ್. ನೇತೃತ್ವದಲ್ಲಿ ಜಿ.ಪಂ. ಉಪಕಾರ್ಯದರ್ಶಿಯನ್ನು ಭೇಟಿ ಮಾಡಿದ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಪಿಡಿಓಗಳು ತಮ್ಮ ಬೇಡಿಕೆಯುಳ್ಳ ಮನವಿ ಪತ್ರವನ್ನು ಸಲ್ಲಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.

ಅಸೂಟಿ ಮತ್ತು ಕೊತಬಾಲ ಎರಡು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಯಾಗಿ (ಹೆಚ್ಚುವರಿ ಪ್ರಭಾರ ಸೇರಿ) ಕರ್ತವ್ಯ ನಿರ್ವಹಿಸುತ್ತಿದ್ದ ಮುಕ್ತಂಹುಸೇನ ಕರಡಿಗುಡ್ಡ ಅವರು ಅತಿಯಾದ ಕೆಲಸದ ಒತ್ತಡ, ಹಿಂದಿನ ಪ್ರಕರಣವೊಂದರ ಮೇಲಿದ್ದ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಡೀ ರಾಜ್ಯದ ಪಿಡಿಒ ಸಮುದಾಯವನ್ನು ತೀವ್ರ ಆಘಾತಕ್ಕೀಡು ಮಾಡಿದೆ. ಈ ಪ್ರಕರಣ ಕೇವಲ ಒಬ್ಬ ಅಧಿಕಾರಿಯ ದುರಂತವಲ್ಲ, ಬದಲಾಗಿ ಇಡೀ ರಾಜ್ಯದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎದುರಿಸುತ್ತಿರುವ ನೈಜ ಮತ್ತು ಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣಾಭಿವೃದ್ಧಿಯ ಆಧಾರ ಸ್ತಂಭವಾಗಿರುವ ಪಿಡಿಒಗಳು ಇಂದು ತೀವ್ರವಾದ ಕೆಲಸದ ಒತ್ತಡದಲ್ಲಿ ನಲುಗಿ ಹೋಗುತ್ತಿದ್ದಾರೆ ಎಂದು ತಮ್ಮ ಸಮಸ್ಯೆಯನ್ನು ಪಿಡಿಓಗಳು ಹೇಳಿಕೊಂಡರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅನ್ವಯವಾಗುವಂತೆ, ಆಯುಕ್ತಾಲಯ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೂ ಕನಿಷ್ಠ ಸೇವಾ ಅವಧಿಯನ್ನು ನಿಗದಿಪಡಿಸಿ ಕಡ್ಡಾಯ ವರ್ಗಾವಣೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪ್ರಸ್ತುತ ಈ ಮೇಲಿನ ಕಚೇರಿಗಳಲ್ಲಿ ಹಲವು ಸಿಬ್ಬಂದಿಗಳು 10-15 ವರ್ಷಗಳಿಂದ ಒಂದೇ ಸ್ಥಳದಲ್ಲಿ ಹುದ್ದೆಯಲ್ಲಿ ಬೇರುಬಿಟ್ಟಿದ್ದು, ಇವರಿಂದ ಕಳಹಂತದ ಅಧಿಕಾರಿಗಳಿಗೆ (ಪಿಡಿಒಗಳಿಗೆ) ವಿನಾ ಕಾರಣ ಕಿರುಕುಳ ನೀಡುವ ಹಾಗೂ ಕಡತಗಳನ್ನು ವಿಳಂಬ ಮಾಡುವ ಸನ್ನಿವೇಶಗಳು ಎದುರಾಗುತ್ತಿವೆ. ಆಡಳಿತದಲ್ಲಿ ವಾರದರ್ಶಕತೆ ತರಲು ಹಾಗೂ ಪಿಡಿಒಗಳ ಮೇಲಿನ ದಬ್ಬಾಳಿಕೆ ತಪ್ಪಿಸಲು ಇವರ ಕಡ್ಡಾಯ ವರ್ಗಾವಣೆ ಅತ್ಯಗತ್ಯವಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ಕೂಡಲೇ ಮೀನಾಕ್ಷಿ ಸುಂದರಂ ಸಮಿತಿಯಿಂದ ವರದಿಯನ್ನು ಪಡೆದು, ಅದರಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಮೂಲಕ ನೌಕರರ ಸುರಕ್ಷತೆ ಮತ್ತು ಹಿತರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಆರ್. ಹಾಗೂ ಜಿಲ್ಲಾಧ್ಯಕ್ಷ ಸುಬ್ಬರಾಜ್ ಅರಸ್ ವಿ.ಆರ್., ಉಪಾಧ್ಯಕ್ಷರಾದ ತೇಜಸ್ವಿನಿ, ತೀರ್ಥ, ಖಜಾಂಜಿ ಮಂಜುನಾಥ್ ಎಸ್.ಎಸ್., ರಾಜ್ಯ ಪರಿಷತ್ ಸದಸ್ಯ ವೆಂಕಟೇಶ್ ಡಿ.ವಿ., ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಹಾಸ ಎಸ್.ಎಲ್., ಎ. ಕೋಕಿಲ, ಕ್ರೀಡಾ ಕಾರ್ಯದರ್ಶಿ ಸುನೀಲ್‌ಕುಮಾರ್ ಎನ್., ವಿಜಯಲಕ್ಷ್ಮಿ ಆರ್. ಪಾಟೀಲ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular