ತುಮಕೂರು ತಾಲೂಕಿನ ಕಂದಾಯ ಇಲಾಖೆಯಲ್ಲಿ ಸರಿಯಾದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಮಾಹಿತಿ ಹಕ್ಕು, ದಾಖಲಾತಿ ಕೊಠಡಿ, ಪಿಂಚಣಿ, ಕಂದಾಯ ಇಲಾಖೆಯ ವಿವಿಧ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರು ಒತ್ತಡ ಬಂದ ಕಾರಣ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಕಂದಾಯ ಶಾಖೆಗೆ ಅನಿರೀಕ್ಷಿತ ಭೇಟಿ ನೀಡಿ ಕಡತ ಪರಿಶೀಲಿಸಿದರು.
ಸಾರ್ವಜನಿಕರು ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ಪ್ರತಿನಿತ್ಯ ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಬರುತ್ತಾರೆ ಆದರೆ ಕೆಲ ಅಧಿಕಾರಿಗಳು ವಿನಾಕಾರಣ ಕುಂಟು ನೆಪ ಹೇಳಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮುಂದೂಡುತ್ತಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿ ಕಂದಾಯ ಇಲಾಖೆಯ ಆಧುನಿಕ ಅಭಿಲೇಖಾಲಯ ಶಾಖೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಪ್ರತಿನಿತ್ಯ ಬರುವ ಅರ್ಜಿಗಳು ಸಂಬಂಧಪಟ್ಟ ದಾಖಲಾತಿಗಳು ಕಡತಗಳಲ್ಲಿ ವಿಲೇವಾರಿ ಆಗದೇ ಇರುವ ಸಂಖ್ಯೆಗಳನ್ನು ಕಂಡು ಸಿಡಿಮಿಡಿಕೊಂಡರು.
ಸಾರ್ವಜನಿಕರಿಂದ ಆವಾಲು ಸ್ವೀಕರಿಸಿ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಡಾ ಎನ್ ತಿಪ್ಪೇಸ್ವಾಮಿ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಕಂದಾಯ ಶಾಖೆಯ ಅಭಿ ಲೇಖಾಲಯ, ಚುನಾವಣಾ ವಿಭಾಗ, ರಾಜಸ್ವ ನಿರೀಕ್ಷಕರ ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಅಭಿಲೇಖಾಲಯದಲ್ಲಿ ಸಿಬ್ಬಂದಿ ಕೊರತೆ ಇದ್ದ ಕಾರಣ ಹೆಚ್ಚುವರಿಯಾಗಿ ಸಿಬ್ಬಂದಿ ಪಡೆದು ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಕ್ರಮಸಂಖ್ಯೆಗೆ ಅನುಗುಣವಾಗಿ ಕೂಡಲೇ ವಿಲೇವಾರಿ ಮಾಡುವಂತೆ ತುಮಕೂರು ತಾಲೂಕು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದೇನೆ. ವಿಳಂಬ ಧೋರಣೆ ಮಾಡುತ್ತಿದ್ದ ಕೆಲ ಅಧಿಕಾರಿಗಳಿಗೆ ಈಗಾಗಲೇ ಕಡ್ಡಾಯವಾಗಿ ಹಾಜರಾತಿ ಹಾಕುವುದು ಸೇರಿದಂತೆ ಸಾರ್ವಜನಿಕರ ಕಡತಗಳನ್ನು ಕ್ರಮಬದ್ಧವಾಗಿ ಪರಿಶೀಲಿಸಿ ವಿಲೇವಾರಿ ಮಾಡುವಂತೆ ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದರು.
ಎಡಿಸಿ ಕಂದಾಯ ಇಲಾಖೆಗೆ ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮ್ಮ ಕೆಲಸ ಕಾರ್ಯದ ವಿವರಣೆ ನೀಡಲು ಕಕ್ಕಾಬಿಕ್ಕಿಯಾದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಪ್ರತಿಯೊಬ್ಬ ಅಧಿಕಾರಿಯ ಬಳಿಗೆ ತೆರಳಿ ಹಾಜರಾತಿ ಪರಿಶೀಲಿಸಿ ಸಾರ್ವಜನಿಕರಿಂದ ಪಡೆದ ಅರ್ಜಿಗಳ ವಿಲೇವಾರಿ ಮಾಹಿತಿಯನ್ನು ಪಡೆದರು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಬೇಕು. ಕಾರಣ ನೀಡಿ ರಜೆ ಪಡೆಯಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ ತ್ವರಿತಗತಿಯಲ್ಲಿ ದಾಖಲೆಗಳನ್ನು ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.


