ತುಮಕೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹೆತ್ತೇನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಳ್ಳತನದಲ್ಲಿ ದೇವರ ಮೇಲಿನ ಒಡವೆಗಳು ಕಳವಾಗಿವೆ. ಈ ಪ್ರಕರಣ ಭಕ್ತರಲ್ಲಿ ಕಳವಳ ಉಂಟುಮಾಡಿದೆ. ಮಾರಮ್ಮ ದೇವಿ ಜಾತ್ರೆ ಆರಂಭವಾಗುತ್ತಿದ್ದು, ಅಷ್ಟರೊಳಗೆ ಕಳ್ಳರನ್ನು ಪತ್ತೆ ಮಾಡಿ, ಕಳವು ಒಡವೆಗಳನ್ನು ದೇವರಿಗೆ ಅರ್ಪಿಸಬೇಕು ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಪೊಲೀಸರಿಗೆ ಒತ್ತಾಯಿಸಿದರು.
ಜಾತ್ರೆ ಹಿನ್ನೆಲೆಯಲ್ಲಿ ಶುಕ್ರವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಗೆ ಭೇಟಿ ನೀಡಿ ಮಾರಮ್ಮದೇವಿಗೆ ಪೂಜೆ ಸಲ್ಲಿಸಿದ ಗೌರಿಶಂಕರ್, ಶಕ್ತಿದೇವತೆಯ ಒಡವೆ ಕದ್ದಿರುವ ಪ್ರಕರಣ ಆತಂಕಕಾರಿ. ಮಾರಮ್ಮನ ಜಾತ್ರೆಯೊಳಗೆ ಕಳ್ಳರನ್ನು ಪತ್ತೆ ಮಾಡಬೇಕು ಎಂದು ತಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಹೆತ್ತೇನಹಳ್ಳಿ ಮಾರಮ್ಮ ಶಕ್ತಿದೇವತೆ. ರಾಜ್ಯಾದ್ಯಂತ ಲಕ್ಷಾಂತರ ಭಕ್ತರಿದ್ದಾರೆ, ಅವರೆಲ್ಲಾ ಜಾತ್ರೆಗೆ ಬರಲಿದ್ದಾರೆ. ದೇವರ ಒಡವೆ ಕಳವಾಗಿರುವುದು ಭಕ್ತರಿಗೆ ಆಘಾತ ಉಂಟುಮಾಡಿದೆ. ಇಂತಹ ಕಳವಳಕಾರಿ ಪರಿಸ್ಥಿತಿಯಲ್ಲಿ ಭಕ್ತರ ಭಾವನೆ ಅರ್ಥ ಮಾಡಿಕೊಂಡು ಪೊಲೀಸರು ಕಳ್ಳರನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು.
ಕಳ್ಳರು ದೇವಸ್ಥಾನದಲ್ಲಿದ್ದ ಸಿ.ಸಿ. ಕ್ಯಾಮರಾ ಒಡೆದುಹಾಕಿದ್ದಾರೆ, 34 ಬೀಗಗಳನ್ನು ಒಡೆದು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಒಡವೆ ಕಳವು ಮಾಡಿರುವುದು ಆಶ್ಚರ್ಯವೆನಿಸುತ್ತದೆ. ದೇವಿಯ ಒಡವೆ ಕದ್ದು ಅಪಚಾರ, ಅಪರಾಧ ಮಾಡಿರುವ ಕಳ್ಳರಿಗೆ ದೇವಿಯೇ ಶಿಕ್ಷೆ ಕೊಡುತ್ತಾಳೆ. ಆದರೂ ಪೊಲೀಸರು ಪ್ರಕರಣವನ್ನು ಬಯಲು ಮಾಡಿ ಭಕ್ತರಲ್ಲಿ ವಿಶ್ವಾಸ ಮೂಡಿಸಬೇಕು ಎಂದರು.
ಹೆತ್ತೇನಹಳ್ಳಿ ಮಾರಮ್ಮ ಎಂದರೆ ಬೇಡುವ ವರ ಕೊಡುವ, ಇಷ್ಟಾರ್ಥ ಸಿದ್ಧಿಸುವ ಶಕ್ತಿಮಾತೆ. ದೇವಿಗೆ ಹರಕೆ ಮಾಡಿಕೊಂಡರೆ ಯಾವುದೇ ಕೋರಿಕೆ ಈಡೇರುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ದೈವಭಕ್ತರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಶೀಘ್ರದಲ್ಲೇ ಈ ದೇವಸ್ಥಾನಕ್ಕೆ ಕರೆತರುವುದಾಗಿ ಹೇಳಿದ ಗೌರಿಶಂಕರ್, ಇಬ್ಬರೂ ಸಚಿವರ ಕೋರಿಕೆಗಳನ್ನು ದೇವಿ ಈಡೇರಿಸಲಿ ಎಂದು ಪ್ರಾರ್ಥಿಸಿದರು. ಈ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.
ತುಮಕೂರು ತಹಶೀಲ್ದಾರ್ ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಪಾಲನೇತ್ರಯ್ಯ, ಕೈದಾಳ ರಮೇಶ್, ಗೂಳೂರು ಕೃಷ್ಣೇಗೌಡ, ನರುಗನಹಳ್ಳಿ ವಿಜಯಕುಮಾರ್, ದೀಪಕ್ ಇದ್ದರು.


