ಪ್ರಸ್ತಾಪಿತ ಔಟರ್ ರಿಂಗ್ ರಸ್ತೆಗೆ ಸಂಬಧಿಸಿದಂತೆ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಆದರೂ ಸರಕಾರಗಳು ನಮ್ಮ ದ್ವನಿಗೆ ಕಿವುಗೊಡುತ್ತಿಲ್ಲ. ಈ ವಿಚಾರದಲ್ಲಿ ಗಟ್ಟಿಯಾದ ಹೋರಾಟ ರೂಪಿಸುವುದೊಂದೆ ನಮ್ಮ ಮುಂದಿರುವ ಆಯ್ಕೆಯಾಗಿದೆ ಎಂದು ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶೂಲದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಭೂ ಬಳಕೆ ಮತ್ತು ಭೂ ಹೊದಿಕೆ ನೀತಿ ಹಾಗೂ ಔಟರ್ ರಿಂಗ್ ರಸ್ತೆ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ರೈತ ಮುಖಂಡರ ಕಾರ್ಯಾಗಾರದಲ್ಲಿ ಭೂಮಿ ಹಕ್ಕಿಗಾಗಿ ಹೋರಾಟದ ಮುಂದಿನ ದಾರಿಗಳು ಎಂಬ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂಮಿ ಉಳಿಸಿಕೊಳ್ಳಲು ಕಾನೂನು ಹೋರಾಟ ಒಂದು ಕಡೆಯಾದರೆ, ಒಕ್ಕೊರಲ ಹೋರಾಟ ಮತ್ತೊಂದು ಕಡೆ ನಡೆಯಬೇಕಿದೆ. 2013ರಲ್ಲಿ ಜಾರಿಗೆ ಬಂದ ಭೂ ಸ್ವಾಧೀನ ಕಾಯ್ದೆಗೆ ಹಲವಾರು ತಿದ್ದುಪಡಿಗಳನ್ನು ತಂದು, ಕಾರ್ಪೋರೇಟ್ ಕಂಪನಿಗಳಿಗೆ ಪೂರಕ ಅಂಶಗಳನ್ನು ಸೇರಿಸಿ, ರಸ್ತೆ, ರೈಲ್ವೆ ಲೈನ್ ಹೆಸರಿನಲ್ಲಿ ರೈತರ ಲಕ್ಷಾಂತರ ಎಕರೆ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಬೀದಿಗೆ ಬೀಳುವಂತೆ ಮಾಡಲಾಗಿದೆ. ಭೂಮಿಯ ಜೊತೆಗೆ, ಆಹಾರ ಅಭದ್ರತೆಯೂ ಕಾಡಲಿದೆ. ನಾವು ಪ್ರಗತಿಯ ವಿರೋಧಿಗಳಲ್ಲ, ನಮ್ಮ ಬದುಕಿಗೆ ಪೂರಕವಾದ ಪ್ರಗತಿ ಬೇಕು. ಮಹಿಳೆಯರು ಈ ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಔಟರ್ರಿಂಗ್ ವಿರೋಧಿಸಿ ಹಾಗೂ ಭೂ ಹೊದಿಕೆ, ಭೂ ಬಳಕೆ ನೀತಿ ಜಾರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಭೂ ಬಳಕೆ ಮತ್ತು ಭೂ ಹೊದಿಕೆ ರಾಷ್ಟ್ರೀಯ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಪಣದಾರ ಸಮುದಾಯಗಳೊಟ್ಟಿಗೆ ಸಮಾಲೋಚನೆ ನಡೆಸುವುದು, ನಂದಿಹಳ್ಳಿ-ಮಲ್ಲಸಂದ್ರ-ವಸಂತ-ನರಸಾಪುರ ಹೆದ್ದಾರಿ ಯೋಜನೆಗಳನ್ನು ಕೈಬಿಡಬೇಕೆಂದು ಒತ್ತಾಯಿಸುತ್ತಿದ್ದೇವೆ. ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಹೆದ್ದಾರಿ ಯೋಜನೆಯ ಪರಿಸರ ಪರಿಣಾಮ ಅಂದಾಜು ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ ಅತ್ಯಂತ ಪಾರದರ್ಶಕವಾಗಿ ಈ ಯೋಜನೆಯ ಎಲ್ಲಾ ಮಾಹಿತಿಗಳನ್ನು ಸಾರ್ವಜನಿಕವಾಗಿ ಮತ್ತು ಅತ್ಯಂತ ಪಾರದರ್ಶಕವಾಗಿ ಮಂಡಿಸಿ ಒಪ್ಪಿಗೆ ಪಡೆಯುವುದು. ಮೇಲ್ಕಂಡ ಎಲ್ಲಾ ಕ್ರಮಗಳನ್ನು ಕೈಗೊಳ್ಳದಿದ್ದರೆ “ನಾಗರೀಕ ಶಾಂತಿಯುತ ಅಸಹಕಾರ ಚಳುವಳಿಯನ್ನು” ಆರಂಭಿಸುವ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಎಐಕೆಕೆಎಂಎಸ್ನಜಿಲ್ಲಾಧ್ಯಕ್ಷ ಎಸ್.ಎನ್.ಸ್ವಾಮಿ ನಿರ್ಣಯವನ್ನು ಮಂಡಿಸಿದರು. ಎಐಕೆಎಸನ ಕಂಬೇಗೌಡ, ಎಐಟಿಯುಸಿ ಗಿರೀಶ್, ಕೆಪಿಆರ್ಎಸ್ನ ಚನ್ನಬಸಣ್ಣ, ರೈತರಾದ ಉದಯ ನಂದಿಹಳ್ಳಿ, ಸಿದ್ದಗಂಗಯ್ಯ, ಸುರೇಶ್, ರಾಜಶೇಖರ್, ನಿಂಗರಾಜು ಇದ್ದರು.


