ಕಾವ್ಯ, ಕತೆ, ಕಾದಂಬರಿ,ಸಂಶೋಧನೆ, ವಿಮರ್ಶೆ ಇತ್ಯಾದಿ ಬರೆದು ಪ್ರಸಿದ್ದರಾದವರು ಕಡೆಯದಾಗಿ ಆಟೋಬಯಾಗ್ರಫಿಗಳನ್ನು ಬರೆದು ಪ್ರಕಟಿಸುವುದು ಒಂದೆಡೆಯಾದರೆ, ಅಸಮ ಸಮಾಜದಲ್ಲಿ ಹುಟ್ಟಿನ ಮೂಲವೇ ಕಾರಣವಾಗಿ ಶೋಷಣೆಗೆ ಒಳಗಾದವರ ಆಟೋಬಯಾಗ್ರಫಿಗಳೂ ಬೆಳಕು ಕಂಡಿವೆ ಎಂದು ಬೆವರ ಹನಿ ಪ್ರಕಾಶನದ ಪ್ರಕಾಶಕ ಕುಚ್ಚಂಗಿ ಪ್ರಸನ್ನ ತಿಳಿಸಿದ್ದಾರೆ.
ಶ್ರೇಣೀಕೃತ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆ ಆಚರಣೆ ಜೀವಂತವಿರುವ ಈ ನೆಲದಲ್ಲಿ ಜಾತಿ ಮಾತ್ರವಲ್ಲದೇ ಹೆಣ್ಣಾಗಿರುವ ಹಾಗೂ ಕಪ್ಪು ಬಣ್ಣ ಹೊಂದಿರುವ ಕಾರಣಗಳಿಂದಾಗಿಯೂ ಸಮಾಜದ ಜೊತೆ ಜೊತೆಗೇ ಕುಟುಂಬದಲ್ಲೂ ಅನುಭವಿಸಬೇಕಾಗಿ ಬಂದ ಕ್ಷಣಗಳನ್ನು ದಾಖಲಿಸಿರುವ ಕೆ.ಬಿ.ನೇತ್ರಾವತಿ ಅವರ ಆಟೋಬಯಾಗ್ರಫಿ “ ಬ್ರೋಕನ್ ಫ್ಯಾಮಿಲಿ” ಬಿಡುಗಡೆಗೆ ಸಿದ್ದವಾಗಿದೆ ಎಂದು ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆವರ ಹನಿ ಪ್ರಕಾಶನ ಹಾಗೂ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯ ಸಹಯೋಗದಲ್ಲಿ ಫೆ.8ರ ಭಾನುವಾರ ಬೆಳಿಗ್ಗೆ 10.30ಕ್ಕೆ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿರುವ ಐಎಂಎ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೆಸರಾಂತ ಲೇಖಕಿ, ವಿಮರ್ಶಕಿ ದಯಾ ಗಂಗನ ಘಟ್ಟ ಕೃತಿ ಕುರಿತು ಮಾತನಾಡುವರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆ ವಹಿಸುವರು. ದಲಿತ ಹೋರಾಟಗಾರ್ತಿ ಆಂಜಿನಮ್ಮ (ಅನುರಾಧ) ಕೆ.ದೊರೈರಾಜ್, ಲೇಖಕಿಯರ ಸಂಘದ ನೂತನ ಅಧ್ಯಕ್ಷೆ ಡಾ.ಆಶಾರಾಣಿ ಬಗ್ಗನಡು ಜೊತೆಗೆ ಲೇಖಕಿ ಕೆ.ಬಿ.ನೇತ್ರಾವತಿ ವೇದಿಕೆಯಲ್ಲಿ ಇರಲಿದ್ದಾರೆ. ತುಮಕೂರಿನ ಸಹೃದಯರು ಸಕಾಲಕ್ಕೆ ಆಗಮಿಸಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕುಚ್ಚಂಗಿ ಪ್ರಸನ್ನ ಕೋರಿದ್ದಾರೆ.


