ಪರಿಶಿಷ್ಟ ಜಾತಿಯಲ್ಲಿನ ಒಳಮೀಲಾತಿಗೆ ಸಂಬಂಧಿಸಿದಂತೆ ಎಂಪೆರಿಕಲ್ ಡಾಟಾ ಸಂಗ್ರಹಕ್ಕೆ ಮೇ.5 ರಿಂದ 30ರವರಗೆ ಸಮೀಕ್ಷೆ ನಡೆಸುವವರು ಮನೆಯ ಬಳಿ ಬಂದಾಗ ಛಲವಾದಿ, ಹೊಲೆಯ ಸಂಬಂಧಿತ ಜಾತಿಗಳ ಜನರು ತಮ್ಮ ಉಪಜಾತಿ ಕಲಂನಲ್ಲಿ ಛಲವಾದಿ ಎಂದು ನಮೂದಿಸುವಂತೆ ಜಿಲ್ಲಾ ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ ಮನವಿ ಮಾಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1931 ರ ಜನಗಣತಿ ವೇಳೆ ಹೊಲೆಯ, ಮಾದಿಗ ಎಂಬುದು ಅಸಂವಿಧಾನಿಕ ಎಂದು, ಹೊಲೆಯ ಮತ್ತು ಮಾದಿಗ ಬದಲು ಎ.ಕೆ., ಎ.ಡಿ, ಎಎ, ನಮೂದನೆಯಿಂದ ಸಾಕಷ್ಟು ಗೊಂದಲ ಉಂಟಾಗಿದೆ.ಈ ಸಮಸ್ಯ ನಿವಾರಣೆಗೆ ಸರಕಾರ ಒಂದು ಸುವರ್ಣ ಅವಕಾಶ ಕಲ್ಪಿಸಿದ್ದು, ಮೇ.5 ರಿಂದ ನಡೆಯುವ ಸಮೀಕ್ಷೆ ವೇಳೆ ಹೊಲೆಯ ಸಮುದಾಯದ ವ್ಯಕ್ತಿಗಳು ತಮ್ಮ ಜಾತಿಯ ಉಪ ಕಲಂನಲ್ಲಿ ಹೊಲೆಯ ಅಥವಾ ಚಲವಾದಿ ಎಂದು ನಮೂದಿಸುವ ಮೂಲಕ ಸರಕಾರಕ್ಕೆ ಸ್ಪಷ್ಟ ಅಂಕಿ ಅಂಶ ದೊರೆಯುವಂತೆ ಮಾಡಬೇಕಾಗಿದೆ ಎಂದರು.
ಛಲವಾದಿ ಮಹಾಸಭಾದ ಅಧ್ಯಕ್ಷ ಸಿ.ಭಾನುಪ್ರಕಾಶ್ ಮಾತನಾಡಿ, ಸರಕಾರದ ಸೌಲಭ್ಯಗಳು ಆಯಾಯ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮೈಸೂರು ರಾಜ್ಯದಲ್ಲಿ ಎಕೆ, ಎಡಿ, ಎಎ, ಗೊಂದಲಗಳಿಂದ ಸಾಕಷ್ಟು ತಪ್ಪು ಅಭಿಪ್ರಾಯಗಳು ಮೂಡಿವೆ. ಇದನ್ನು ಹೋಗಲಾಡಿಸಲು ಸರಕಾರ ಒಂದು ಅವಕಾಶ ಕಲ್ಪಿಸಿದೆ. ಹಾಗಾಗಿ ತುಮಕೂರು ಜಿಲ್ಲೆಯ ಎಲ್ಲಾ ಆದಿ ದ್ರಾವಿಡ ಸಮುದಾಯದ ಜನರು ತಮ್ಮ ಜಾತಿ ಉಪಕಲಂನಲ್ಲಿ ಛಲವಾದಿ ಎಂದು ಬರೆಯಿಸುವ ಮೂಲಕ ಜನಸಂಖ್ಯೆಯ ನಿಖರ ಮಾಹಿತಿ ಲಭ್ಯವಾಗುವಂತೆ ಮಾಡಬೇಕು ಎಂದರು.
ಸರಕಾರದ ಮೂರು ಹಂತದ ಸಮೀಕ್ಷೆಯಲ್ಲಿ ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡುವ ವೇಳೆ ಬಾಡಿಗೆ ಮನೆಯಲ್ಲಿರುವ ವ್ಯಕ್ತಿಗಳು ತಮ್ಮಜಾತಿ ಬೆರೆಯಲು ಹಿಂಜರಿಕೆಯಾದರೆ, ಎರಡನೇ ಹಂತದಲ್ಲಿ ಚುನಾವಣಾ ಬೂತ್ ವಹಿ ನಡೆಯುವ ಸಮೀಕ್ಷೆಯ ವೇಳೆ ಖುದ್ದು ಬೂತ್ಗಳಿಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಇಲ್ಲವೆ ಮೂರನೇ ಹಂತದಲ್ಲಿ ಅನ್ಲೈನ್ ಮೂಲಕ ಸ್ವಯಂ ಘೋಷಿಸಿಕೊಳ್ಳಲು ಅವಕಾಶವಿದ್ದು, ಎಲ್ಲಾ ದಾಖಲಾತಿಗಳೊಂದಿಗೆ ಅನ್ಲೈನ್ನಲ್ಲಿಯೂ ಘೋಷಣೆ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೂ ಸಮೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಒಂದು ವೇಳೆ ಸಮೀಕ್ಷೆಯಿಂದ ಹೊರಗೆ ಉಳಿದರೆ ಸರಕಾರದ ಎಲ್ಲಾ ಸವಲತ್ತುಗಳಿಂದಲೂ ಶಾಶ್ವತವಾಗಿ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಛಲವಾದಿ ಮುಖಂಡರಾದ ಶ್ರೀನಿವಾಸ್, ಛಲವಾದಿ ಮುಖಂಡರಾದ ರಂಗಪ್ಪ, ಅಪ್ಪಾಜಯ್ಯ, ತಾ.ಪಂ. ಮಾಜಿ ಅಧ್ಯಕ್ಷ ಗಂಗಾಂಜನೇಯ, ಗಿರೀಶ್, ಹೆಗ್ಗೆರೆ ಕೃಷ್ಣಪ್ಪ, ಛಲವಾದಿ ಶೇಖರ್, ಶಿವಲಿಂಗಯ್ಯ ಮತ್ತಿತರರು ಇದ್ದರು.


