ಪ್ರಧಾನ ಮಂತ್ರಿ ಮೋದಿಯವರೇ, ಪಾಕಿಸ್ತಾನದ ಚಿತಾವಣೆ ಅತಿಯಾಗಿದೆ. ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರನ್ನು ಕೊಂದಿದ್ದು ಅಕ್ಷಮ್ಯ ಅಪರಾಧ. ಇಂತಹ ಪಾಪ ಕೃತ್ಯಕ್ಕೆ ಸಾಥ್ ನೀಡಿರುವ ಪಾಕಿಸ್ತಾನದ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ ಎಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮುಸ್ಲಿಂ ಭಾಂದವರು ಒಕ್ಕೊರಲ ಆಗ್ರಹ ಮಾಡಿದ್ದಾರೆ.
ತುರುವೇಕೆರೆ ಪಟ್ಟಣದಲ್ಲಿರುವ ನಾಲ್ಕು ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡಿದ ನಂತರ ಬಾಣಸಂದ್ರ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಮುಸ್ಲಿಂ ಬಾಂಧವರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಪಾಕಿಸ್ತಾನದ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಮುಖಂಡ ಜಪ್ರುಲ್ಲಾ, ದೇಶದ ಐಕ್ಯತೆಗೆ ಧಕ್ಕೆ ಬಂದರೆ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ಕಾಶ್ಮೀರದಲ್ಲಿ ನಡೆದ ಕೃತ್ಯ ನಾಗರೀಕರನ್ನು ತಲೆತಗ್ಗಿಸುವಂತೆ ಮಾಡಿದೆ. ಇದೊಂದು ಅನಾಗರೀಕರು ಮಾಡುವ ಕೃತ್ಯ. ಮೃತ ಹೊಂದಿದ 26 ಕುಟುಂಬದ ಸದಸ್ಯರಿಗೆ ಇಡೀ ದೇಶದ ಜನರು ಧೈರ್ಯ ತುಂಬುವ ಕೆಲಸ ಮಾಡಬೇಕು. ಪಾಕಿಸ್ತಾನದೊಂದಿಗೆ ಯುದ್ಧ ಸಾರಬೇಕು. ದೇಶದ ಶಾಂತಿಗೆ ಭಂಗ ತರುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು ಎಂದರು.
ಪಾಕಿಸ್ತಾನದ ಕೆಲವೇ ಮಂದಿ ಮಾಡಿದ ಕುಕೃತ್ಯಕ್ಕೆ ಭಾರತ ದೇಶದ ಮುಸ್ಲಿಂ ಸಮುದಾಯವನ್ನು ಅನುಮಾನಪಡುವ ಸ್ಥಿತಿ ಇದೆ. ಆದರೆ ಭಾರತದಲ್ಲಿರುವ ಎಲ್ಲಾ ಮುಸ್ಲಿಂ ಸಮುದಾಯ ಭಾರತಾಂಬೆಯ ಸುಪುತ್ರರು. ನಾವೆಲ್ಲರೂ ಸಹೋದರರ ರೀತಿ ಇದ್ದೇವೆ. ದೇಶದ ಭದ್ರತೆಗೆ ಚ್ಯುತಿ ಬಂದರೆ ಒಗ್ಗೂಡಿ ಹೋರಾಡಬೇಕಿದೆ. ದೇಶದಲ್ಲಿರುವ ಮುಸ್ಲಿಂ ಸಮುದಾಯ ಪಾಕಿಸ್ತಾನದ ವಿರುದ್ಧ ದನಿ ಎತ್ತಬೇಕು ಎಂದು ಹೇಳಿದರು.
ಬಾಣಸಂದ್ರ ರಸ್ತೆ ವೃತ್ತದಿಂದ ತಾಲೂಕು ಕಚೇರಿಯವರೆಗೆ ಶಾಂತಿಯಿಂದ ಪ್ರತಿಭಟನೆ ಮಾಡಿದರು. ಮೃತರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಒಂದು ನಿಮಿಷಗಳ ಕಾಲ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಪಟ್ಟಣ ಪಂಚಾಯಿತಿ ಸದಸ್ಯ ನದೀಂ, ಇಮ್ತಿಯಾಜ್ ಪಾಷಾ, ನವಾಜ್, ಸೈಯದ್ ನೂರುಲ್ಲಾ, ಸಿರಾಜ್ ಅಹಮದ್, ಅಸ್ಲಾಂ, ರಮಹತುಲ್ಲಾ, ಅಫ್ಜಲ್, ಅಬ್ದುಲ್ ರಜಾಕ್, ನಯಾಜ್, ಹುಸೇನ್, ಜಫುö್ರಲ್ಲಾ ಖಾನ್, ಶೌಕತ್, ಜಾಫರ್, ಹಕೀಂ ಸಾಬ್, ಸಾಮಿಲ್ ನಯಾಜ್, ಮುಜಾಮಿಲ್ ಸೇರಿದಂತೆ ನೂರಾರು ಮಂದಿ ಇದ್ದರು.


