ತತ್ವಪದಗಳು ನಮ್ಮ ಅಂತರAಗವನ್ನು ದರ್ಶಿಸುವ ಮೂಲಕ ಅಸ್ಮಿತೆಯ ಅರಿವು ಮೂಡಿಸುತ್ತವೆ. ಸಾತ್ವಿಕ ದೃಷ್ಟಿಯಿಂದಲೇ ಜೀವನದ ರಹಸ್ಯಗಳನ್ನು ಭೇದಿಸಲು ಅವು ಪ್ರೇರೇಪಿಸುತ್ತವೆ. ಇವರ ಮಾರ್ಗ ಭಕ್ತಿ ಅಥವಾ ದೈವಪಥವಲ್ಲ, ಜಾತಿ ಧರ್ಮದಂತಹ ಸೀಮಿತ ಹಂಗುಗಳನ್ನು ಮೀರಿದ ಬದುಕಿನ ಚಿಂತನಾ ಕ್ರಮವಾಗಿದೆ ಎಂದು ಸಾಹಿತಿ ಡಾ. ನಟರಾಜ್ ಬೂದಾಳ್ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ತತ್ವಪದ ಸಾಹಿತ್ಯ ಮತ್ತು ಗಾಯನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಾಹಿತ್ಯದಲ್ಲಿ ತತ್ವಪದಗಳ ಹಾಗೂ ತತ್ವಪದಕಾರರ ಬಹುದೊಡ್ಡ ಪರಂಪರೆಯೇ ಇದೆ. ಅದು ಸಾಂಸ್ಕೃತಿಕ ಸಿರಿವಂತಿಕೆಯಿಂದ ಸಮೃದ್ಧವಾಗಿದೆ. ಕರ್ನಾಟಕ ಸರ್ಕಾರ ನಮ್ಮ ನಾಡಿನ ತತ್ವಪದಗಳನ್ನು ಸಂಗ್ರಹಿಸಿ 52 ಸಂಪುಟಗಳಲ್ಲಿ ಪ್ರಕಟಿಸಿದೆ. ಆದರೆ ಅಂತಹ ಪರಂಪರೆಯೊಂದರ ಶಿಸ್ತಿನ ಅಧ್ಯಯನವಾಗಿರುವುದು ಕಡಿಮೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ವಿಶ್ವವಿದ್ಯಾನಿಲಯಗಳು ಗಮನಹರಿಸಬೇಕು. ತತ್ವಪದಗಳನ್ನು ತತ್ವಪದಕಾರರನ್ನು ಅರಿತುಕೊಳ್ಳುವುದೆಂದರೆ ನಮ್ಮನ್ನು ನಾವು ಕಂಡುಕೊಳ್ಳುವುದೆಂದರ್ಥ ಎಂದು ತಿಳಿಸಿದರು.
ಕಥೆಗಾರ ಡಾ. ಜಿ.ವಿ.ಆನಂದಮೂರ್ತಿ ಮಾತನಾಡಿ, ತತ್ವಪದ ಪರಂಪರೆ ವಿದ್ವಾಂಸರಿಂದಾಗಲೀ, ಧರ್ಮಗುರುಗಳಿಂದಾಗಲೀ ನಿರ್ಮಾಣವಾದುದಲ್ಲ. ಅದು ಜನಸಾಮಾನ್ಯರಿಂದ ನಿರ್ಮಾಣವಾದ ಜಾತಿ ಮತ ಬೇಧವಿರದ ಸಾಹಿತ್ಯ ಎಂದರು.
ಕನ್ನಡ ಸಂಸ್ಕೃತಿಯ ಅಸ್ಮಿತೆಯಾಗಿರುವ ತತ್ವಪದಗಳು ನುಡಿಪಥವಾಗಿರದೆ ನಡೆಪಥವಾಗಿವೆ. ತತ್ವಪದಗಳು ವ್ಯಕ್ತಿಯಲ್ಲಿರುವ ಅಹಂ ಅನ್ನು ಕಳೆದು ಅವನನ್ನು ಗುರುಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಅಂತರಂಗದ ಕಣ್ಣನ್ನು ತೆರೆಸಲು ಸಹಾಯ ಮಾಡುವ ತತ್ವಪದಗಳು ವಿವೇಕ, ವಿನಯವಂತಿಕೆಯನ್ನು ಕಲಿಸುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಶ್ರಮ ಸಂಸ್ಕೃತಿಯ ಹರಿಕಾರರಾದ ಜನಪದರು ಸತ್ಯ ಶುದ್ಧ ಕಾಯಕ ಜೀವಿಗಳು. ದಿನನಿತ್ಯದ ಕೆಲಸಗಳಿಂದ ಉಂಟಾದ ಬೇಸರವನ್ನು ತಣಿಸಲು ಅವರು ಆಶ್ರಯಿಸಿಕೊಂಡಿದ್ದು ಹಾಡುಗಳನ್ನು. ಈ ಹಾಡುಗಳಿಂದ ಪ್ರೇರಣೆ ಪಡೆದ ಇಂತಹ ಪದ್ಯಗಳನ್ನು ಕಟ್ಟುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಇತಿಹಾಸ ಸಂಶೋಧಕ ಮರಿಬಸಪ್ಪ, ಕಸಾಪ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ, ಡಾ. ಕಂಟಲಗೆರೆ ಸಣ್ಣಹೊನ್ನಯ್ಯ ಜಿ.ಹೆಚ್.ಮಹದೇವಪ್ಪ, ಚಿಕ್ಕಬೆಳ್ಳಾವಿ ಶಿವಕುಮಾರ್, ಕಲಾಶ್ರೀ ಲಕ್ಷö್ಮಣದಾಸ್ ಇದ್ದರು.


