ಅಭಿವೃದ್ಧಿ ಹೆಸರಿನಲ್ಲಿ ಗಿಡ-ಮರಗಳನ್ನು ಕಡಿದು ಅರಣ್ಯ ಪ್ರದೇಶವನ್ನು ನಾಶಪಡಿಸುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ವನ್ಯಜೀವಿ ಸಂಕುಲಗಳು ವಿನಾಶದ ಅಂಚಿಗೆ ತಲುಪುತ್ತಿವೆ. ವನ್ಯಜೀವಿ ಸಂಕುಲದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ತುಮಕೂರಿನ ಎಂಪ್ರೆಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.
ಅರಣ್ಯ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಜಿಲ್ಲೆಯಲ್ಲಿ ದೇವರಾಯನದುರ್ಗ, ಬುಕ್ಕಾಪಟ್ಟಣ ಸೇರಿದಂತೆ ವಿವಿಧ ಅರಣ್ಯ ಪ್ರದೇಶದಲ್ಲಿ ಬೇರೆಲ್ಲೂ ಕಾಣಸಿಗದ ವಿವಿಧ ಪ್ರಬೇಧದ ಪಕ್ಷಿ ಹಾಗೂ ಹಾವಿನ ಸಂತತಿಗಳನ್ನು ಕಾಣಬಹುದಾಗಿದೆ. ಈ ಅಪರೂಪದ ಪ್ರಬೇಧಗಳನ್ನು ಸಂರಕ್ಷಿಸಬೇಕು. ಅರಣ್ಯ ಪ್ರದೇಶ ಒತ್ತುವರಿ, ಪ್ರಾಣಿಗಳ ಬೇಟೆ, ಜಾಗತಿಕ ತಾಪಮಾನ ಏರಿಕೆ, ಪರಿಸರ ನಾಶದಿಂದ ವನ್ಯ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮಧುಗಿರಿ ಭಾಗದಲ್ಲಿ ಕೃಷ್ಣಾಮೃಗಗಳ ಅರಣ್ಯಧಾಮ ಎಂದು ಘೋಷಣೆ ಮಾಡಿದ್ದರಿಂದ ಕೃಷ್ಣಮೃಗಗಳ ಬೇಟೆಯಾಡುವುದು ನಿಂತಿದೆ. ಇದರಿಂದ ಕೃಷ್ಣಮೃಗಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಒತ್ತುವರಿಯಿಂದ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಕಾಡಿನಲ್ಲಿ ಕುಡಿಯಲು ನೀರು, ಆಹಾರ ದೊರೆಯದಿದ್ದಾಗಲೂ ಪ್ರಾಣಿಗಳು ಸ್ವಾಭಾವಿಕವಾಗಿ ಕಾಡಿನಿಂದ ನಾಡಿನ ಕಡೆಗೆ ಬರುವುದರಿಂದ ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಪ್ರಾಣಿಗಳು ಯಾರಿಗೂ ತೊಂದರೆ ಮಾಡುವುದಿಲ್ಲ. ಮನುಕುಲ ರಕ್ಷಣೆಯಾಗಬೇಕಾದರೆ ವನ್ಯಜೀವಿಗಳ ರಕ್ಷಣೆಯೂ ಆಗಬೇಕು ಎಂದು ಹೇಳಿದರು.
ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದರಿಂದಲೂ ವನ್ಯಜೀವಿ ಸಂತತಿ ನಾಶವಾಗುತ್ತಿವೆ. ಗಿಡ-ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿದಲ್ಲಿ ಜಾಗತಿಕ ತಾಪಮಾನದ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಲಹೆ ನೀಡಿದರು. ದೇಶದಲ್ಲಿ ಹಸಿರು ಹೊದಿಕೆ ಪ್ರಮಾಣ ಶೇ.33 ಹಾಗೂ ರಾಜ್ಯದಲ್ಲಿ ಶೇ.20ರಷ್ಟಿದ್ದು, ತುಮಕೂರಿನಲ್ಲಿ ಶೇ. 12.4ರಷ್ಟು ಮಾತ್ರ ಇದೆ. ಮುಂದಿನ 2 ವರ್ಷಗಳಲ್ಲಿ ಜಿಲ್ಲೆಯ ಹಸಿರು ಹೊದಿಕೆ ಪ್ರಮಾಣವನ್ನು ಶೇ. 16ಕ್ಕೇರಿಸಬೇಕು. ಹಸಿರು ಹೊದಿಕೆ ಪ್ರಮಾಣವನ್ನು ಹೆಚ್ಚಿಸಿ ಜಾಗತಿಕ ತಾಪಮಾನವನ್ನು ತಗ್ಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಪ್ರತಿವರ್ಷ 15 ಲಕ್ಷ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.


