ಶ್ರೀಕೃಷ್ಣ ಜನ್ಮಾಷ್ಠಮಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಚಿವ ದಿವಂಗತ ಎ.ಕೃಷ್ಣಪ್ಪ ಅವರ ಪುತ್ರಿ ಮಾಜಿ ಶಾಸಕಿ ಪೂರ್ಣಿಮಾ ಅವರ ಬೆಂಗಳೂರಿನ ಕೆಆರ್ ಪುರಂ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈ ಭೇಟಿ ಮಾಜಿ ಶಾಸಕಿ ಪೂರ್ಣಿಮಾ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದಕ್ಕೆ ಪುಷ್ಠೀಕರಿಸಿದಂತಿದೆ.
ಬಳಿಕ ಮಾತನಾಡಿದ ಪೂರ್ಣಿಮಾ, ತಮಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುವ ಯೋಚನೆಯೇನೂ ಇಲ್ಲ. ಒಂದು ಪಕ್ಷ ಅಂಥ ನಿರ್ಧಾರವೇನಾದರೂ ತೆಗೆದುಕೊಂಡರೆ ಕದ್ದುಮುಚ್ಚಿಯೇನೂ ಹೋಗುವುದಿಲ್ಲ. ಮಾಧ್ಯಮದವರಿಗೆ ತಿಳಿಸಿಯೇ ಹೋಗುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ಸಂಘದ ಕೆಲಸವೊಂದರ ನಿಮಿತ್ತ ಶಿವಕುಮಾರ್ ಅವರನ್ನು ಭೇಟಿಯಾದೆ. ಈ ಸಂದರ್ಭದಲ್ಲಿ ಹಬ್ಬಕ್ಕೆ ಮನೆಗೆ ಬರುವಂತೆ ಆಹ್ವಾನ ನೀಡಿದೆ. ಹೀಗಾಗಿ ಶಿವಕುಮಾರ್ ಅವರು ಮನೆಗೆ ಬಂದಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ಅವರು ಮನೆಯಲ್ಲಿದ್ದಾಗ ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯಲಿಲ್ಲ. ಎಲ್ಲರೂ ಹಬ್ಬದ ವಾತಾವರಣದಲ್ಲಿ ಕಳೆದು ಹೋಗಿದ್ದೆವು ಎಂದು ಹೇಳಿದ್ದಾರೆ.


