ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಅವಕಾಶ ವಂಚಿತರ ಸಮುದಾಯಗಳನ್ನು ಮತ್ತು ಬಡಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ವಿದ್ಯಾರ್ಥಿಗಳ ಹೋರಾಟ ಮುಂದುವರಿಯಬೇಕು ಜನಪರ ಚಿಂತಕ ಕೆ.ದೊರೈರಾಜ್ ಕರೆ ನೀಡಿದ್ದಾರೆ.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಎಐಡಿಎಸ್ಒನ 8ನೇ ರಾಜ್ಯಮಟ್ಟದ ಸಮ್ಮೇಳನದ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸರ್ಕಾರಗಳು ಕಾರ್ಪೋರೇಟ್ ಬಂಡವಾಳಶಾಹಿ ಕೈಗೊಂಬೆಗಳನ್ನು ಶಿಕ್ಷಣ ನೀತಿಗಳನ್ನು ಜಾರಿಗೆ ತರುತ್ತಿವೆ. ಹೋರಾಟಗಳಿಲ್ಲದೆ ಇದನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ.ವಿದ್ಯಾರ್ಥಿ ಯುವಜನರೇ ಈ ಹೋರಾಟಗಳ ಜೀವಾಳ ಎಂಬುದನ್ನು ಇತಿಹಾಸವೇ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಎಐಡಿಎಸ್ಒನ ಅಖಿಲ ಭಾರತ ಅಧ್ಯಕ್ಷ ವಿ.ಎನ್.ರಾಜಶೇಖರ್ ಮಾತನಾಡಿ, ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬ ಘೋಷಣೆಯೊಂದಿಗೆ ಇಡೀ ರಾಜ್ಯಾದ್ಯಂತ ನಡೆದ ಬೃಹತ್ ಚಳವಳಿಯ ಪ್ರತಿಫಲವಾಗಿ ಪ್ರಸ್ತುತ ರಾಜ್ಯ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ರದ್ದುಪಡಿಸಿದೆ ಎಂದರು.

ಆದರೆ ಇದೇ ಸರ್ಕಾರ ಎನ್ಇಪಿಯ ಭಾಗವಾಗಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಖಾಸಗಿಯವರಿಗೆ ದತ್ತು ನೀಡಬೇಕೆಂದು ಪ್ರಸ್ತಾಪಿಸಿರುವುದು ಆತಂಕಕಾರಿಯಾಗಿದೆ. ಇದರ ವಿರುದ್ಧ ಮತ್ತೆ ವಿದ್ಯಾರ್ಥಿಗಳನ್ನು ಬೃಹತ್ ಚಳವಳಿಗೆ ಸಜ್ಜಗೊಳಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.
ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಈ ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ನೇತಾಜಿ ಅವರು ದೇಶದ ಸಾರ್ವಜನಿಕ ಶಿಕ್ಷಣವನ್ನು ಬಲಿಷ್ಠಗೊಳಿಸಬೇಕೆಂದು ಹೇಳಿದ್ದರು. ಅವರ ಈ ಕನಸ್ಸನ್ನು ನನಸಾಗಿಸುವ ಸಂಕಲ್ಪವನ್ನು ತೆಗೆದುಕೊಳ್ಳುವುದೇ 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಸಮಾರೋಪದ ನೈಜ ಆಶಯವಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್ಒ ರಾಜ್ಯ ಅಧ್ಯಕ್ಷೆ ಅಶ್ವಿನಿ ವಹಿಸಿದ್ದರು. ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೌರವ್ ಘೋಷ್, ರಾಜ್ಯ ಉಪಾಧ್ಯಕ್ಷ ಹಣಮಂತ, ಖಜಾಂಚಿ ಅಭಯಾ ದಿನಾಕರ್ ವೇದಿಕೆಯಲ್ಲಿದ್ದರು.
ಇದಕ್ಕೂ ಮೊದಲು ಟೌನ್ ಹಾಲ್ ನಿಂದ ಅಮಾನಿಕೆರೆಯ ಗಾಜಿನ ಮನೆಯವರೆಗೂ ಸಾವಿರಾರು ವಿದ್ಯಾರ್ಥಿಗಳನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಎನ್ಇಪಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.


