ದೇಶದ ಎಲ್ಲಾ ರಂಗಗಳಲ್ಲೂ ಯುವ ಸಮೂಹ ಮತ್ತು ಎಲ್ಲಾ ಜಾತಿ, ಜನ ವರ್ಗಗಳ ಪ್ರತಿನಿಧಿಗಳು ಪಾಲ್ಗೊಳ್ಳುವಿಕೆಯ ಮಹಾದ್ವಾರವನ್ನು ತೆರೆದವರು ರಾಜೀವ್ ಗಾಂಧಿ. ಇದಕ್ಕಾಗಿ ಅಧಿಕಾರ ವಿಕೇಂದ್ರೀಕರಣ ಜಾರಿ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದರು. ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ಅವಕಾಶವನ್ನು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ವಿಸ್ತರಿಸಿದವರು ರಾಜೀವ್ ಗಾಂಧಿ. ಇಂದು ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರೆಲ್ಲರೂ ರಾಜೀವ್ ಗಾಂಧಿ ಅವರನ್ನು ಸ್ಮರಿಸಬೇಕು. ಶೇ.50 ಮಹಿಳಾ ಮೀಸಲಾತಿ ಸಾಧ್ಯ ಆಗಿದ್ದು ರಾಜೀವ್ ಗಾಂಧಿ ಅವರಿಂದ ಎನ್ನುವುದನ್ನು ದೇಶದ ಪ್ರತಿಯೊಬ್ಬ ಮಹಿಳೆಯರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್ ನೆಟ್ ವ್ಯವಸ್ಥೆಯಲ್ಲಿ ಭಾರತದಲ್ಲಿ ಕ್ರಾಂತಿ ಮಾಡಿದವರು ರಾಜೀವ್ ಗಾಂಧಿಯವರು. ಅವರು ಭವ್ಯ ಭಾರತ ನಿರ್ಮಾಣದ ಮತ್ತು ಸಾಮಾಜಿಕ ನ್ಯಾಯದ ಸಮ ಸಮಾಜವನ್ನು ರೂಪಿಸುವ ಮಹಾನ್ ಕನಸು ಮತ್ತು ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದರು. ಅವೆಲ್ಲಾ ಜಾರಿ ಮಾಡುತ್ತಿದ್ದ ಹೊತ್ತಲ್ಲೇ ಹುತಾತ್ಮರಾಗಿ ಈ ನೆಲದ ಮಣ್ಣಿನಲ್ಲಿ ತ್ಯಾಗಮಯಿಯಾಗಿ ದಾಖಲಾದರು ಎಂದು ಹೇಳಿದರು.
ದೇಶಕ್ಕಾಗಿ, ದೇಶದ ಸಮಗ್ರತೆಗಾಗಿ ಹೋರಾಟ ಮಾಡಿದ, ತ್ಯಾಗ ಮಾಡಿದ, ಹುತಾತ್ಮರಾದ ಇತಿಹಾಸ, ಚರಿತ್ರೆ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಈ ಯಾವ ಚರಿತ್ರೆ ಮತ್ತು ಇತಿಹಾಸ ಬಿಜೆಪಿಗೂ ಇಲ್ಲ, ಸಂಘ ಪರಿವಾರಕ್ಕೂ ಇಲ್ಲ. ಕೇವಲ ಭರ್ಜರಿ ಭಾಷಣ ಮಾಡುವುದರಲ್ಲಿ ಮಾತ್ರ ಬಿಜೆಪಿ ಪರಿವಾರದವರು ನಿಸ್ಸೀಮರು. ದೇಶ ನಿರ್ಮಾಣ ಕ್ರಿಯೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಪಾತ್ರ ಏನೇನೂ ಇಲ್ಲ. ಕೇವಲ ಭಾಷಣಗಳಿಂದ ದೇಶ ನಿರ್ಮಾಣ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ಬೋಸ್ ರಾಜು, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.


