ಇಡೀ ಭಾರತ ದೇಶದಲ್ಲಿ ಕರ್ನಾಟಕವು ಹೂಡಿಕೆಗೆ ಉತ್ತಮ ಅವಕಾಶಗಳನ್ನು ಹೊಂದಿದೆ. ಕರ್ನಾಟಕ ದೇಶದ ಇತರೆ ನಗರಗಳಿಗೆ ಮಾದರಿಯಾಗಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ಪಾರ್ಕ್ ಬಳಿ ಹಮ್ಮಿಕೊಂಡಿದ್ದ ಇಂಡಿಯನ್ ಇನ್ನೋವೇಷನ್ ಸಮಿಟ್ ಸಿಐಐ ಇಂಡಿಯಾ ಇನ್ನೋವರ್ಜ್ – 2023ಯ 19ನೇ ಆವೃತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಲ್ಲಿನ ಶಿಕ್ಷಣ, ತಂತ್ರಜ್ಞಾನ, ನೀರಾವರಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳು ದೇಶದ ಇತರ ನಗರಗಳಿಗೆ ಮಾದರಿಯಾಗಿವೆ. ಕರ್ನಾಟಕ ಸರ್ಕಾರವು ಉದ್ಯಮ ಹಾಗೂ ಉದ್ಯೋಗ ಸೃಷ್ಟಿಗೆ ಸಾಕಷ್ಟು ಒತ್ತು ನೀಡುತ್ತಿದೆ. ಇಂದು ಗುಣಮಟ್ಟದ ಶಿಕ್ಷಣಕ್ಕಾಗಿ ಬೇರೆ ಊರುಗಳಿಂದ ಬೆಂಗಳೂರಿಗೆ ವಿದ್ಯಾರ್ಥಿಗಳು ವಲಸೆ ಬರುವ ಪರಿಸ್ಥಿತಿ ಇದೆ ಎಂದು ತಿಳಿಸಿದ್ದಾರೆ.
ಕರ್ನಾಟಕವು ಉದ್ಯಮ ಸ್ಥಾಪನೆಗೆ ಸೂಕ್ತವಾಗಿರುವ ಸ್ಥಳವಾಗಿದೆ. ಇದರಿಂದ ಉದ್ಯಮಗಳಿಗೂ ಲಾಭವಾಗಲಿದೆ ಜೊತೆಗೆ ಸರ್ಕಾರಕ್ಕೂ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಅಭಿವೃದ್ಧಿಗಾಗಿ ಎಲ್ಲರನ್ನು ಒಟ್ಟುಗೂಡಿಸಿ ಮುಂದೆ ಸಾಗುತ್ತಿದ್ದೇವೆ. ಪಕ್ಷಾತೀತವಾಗಿ ಮುಂದುವರಿದು ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುತ್ತೇವೆ ಎಂದು ತಿಳಿಸಿದ್ದಾರೆ.


