ರಾಜ್ಯದಲ್ಲಿ ಅಲೆಮಾರಿ-ಆದಿವಾಸಿ ಸಮುದಾಯಗಳು ನೆಲೆ-ನೆಲ ಇಲ್ಲದೆ ಜೀವನ ಸಾಗಿಸುತ್ತಿದ್ದು ಆ ಸಮುದಾಯಗಳ ಅಭಿವೃದ್ಧಿಗೆ ಅಲೆಮಾರಿ-ಆದಿವಾಸಿ ಆಯೋಗ ರಚನೆ ಮಾಡಲು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ತಿಳಿಸಿದ್ದಾರೆ.
ತುಮಕೂರು ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ತಳಸಮುದಾಯಗಳು ಮತ್ತು ನೆಲೆ ಇಲ್ಲದ ಸಮುದಾಯಗಳನ್ನು ಯಾವ ಸರ್ಕಾರಗಳು ಗುರುತಿಸಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಸಾಮಾಜಿಕ ನ್ಯಾಯ ವಿಭಾಗವನ್ನು ಮಾಡಿದ್ದು, ಯಾವ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲವೋ ಅಂತಹ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಂತಹ ಕೆಲಸ ನಡೆಯುತ್ತಿದೆ ಎಂದರು.
ಅಲೆಮಾರಿ-ಆದಿವಾಸಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳಿಗೆ ನೆಲೆಯಿಲ್ಲ. ನೆಲವೂ ಇಲ್ಲ. ಹಲವು ವರ್ಷಗಳಿಂದ ಈ ಸಮುದಾಯಗಳಿಗೆ ಮನೆಗಳನ್ನು ಒದಗಿಸಲು ಪ್ರಯತ್ನ ನಡೆಯುತ್ತಲೇ ಇದೆ. ಅನೇಕ ಕಡೆ ಮನೆಗಳು ಆಗಿದ್ದರೂ ಇದು ಸಾಲದು. ಅಲೆಮಾರಿ-ಆದಿವಾಸಿ ಸಮುದಾಯಗಳು ಸ್ವಾವಲಂಬಿಗಳಾಗಲು ಎರಡು ಎಕರೆ ಭೂಮಿ ಕೊಡಿ ಎಂದು ಕೇಳುತ್ತಿವೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಹೇಳಿದರು.
ಅಲೆಮಾರಿ-ಆದಿವಾಸಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ಪಡೆಯುವುದು ಕಷ್ಟವಾಗಿದೆ. ಇದು ಒಂದು ದೊಡ್ಡ ಸಮಸ್ಯೆಯಾಗಿದೆ. ಅಲೆಮಾರಿ ಮತ್ತು ಆದಿವಾಸಿಗಳಿಗೆ ಹಲವು ಸಮಸ್ಯೆಗಳಿದ್ದು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ. ಅಲೆಮಾರಿ-ಆದಿವಾಸಿ ಸಮುದಾಯಗಳು ಅಭಿವೃದ್ಧಿ ಹೊಂದಬೇಕಾದರೆ ಒಂದು ಆಯೋಗವನ್ನು ರಚನೆ ಮಾಡಬೇಕು. ಆಯೋಗ ರಚನೆ ಆದರೆ ಈ ಸಮುದಾಯಗಳ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದರು.
ಅಲೆಮಾರಿ ಆದಿವಾಸಿಗಳ ಜೊತೆಗೆ ಅತಿ ಹಿಂದುಳಿದ ವರ್ಗಗಳು ಸಮಸ್ಯೆ ಎದುರಿಸುತ್ತಿವೆ. ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಆದಿವಾಸಿ-ಅಲೆಮಾರಿ ಸಮುದಾಯ ಗಳೆಂದರೆ ಕಾಡುಗೊಲ್ಲರು, ಮ್ಯಾಸ ಬೇಡರು. ಈ ಸಮುದಾಯಗಳು ಹೀನಾಯ ಸ್ಥಿತಿಯಲ್ಲಿವೆ ಎಂದು ಹೇಳಿದರು.
ನಾನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕಾಡುಗೊಲ್ಲರನ್ನು ಕ್ಯಾಟಗರಿಗೆ ಹಾಕಬೇಕೆಂದು ಇದ್ದೆವು. ನನ್ನ ಕಮಿಷನ್ ಅವಧಿಯಲ್ಲೇ ಕೆಟಗರಿಗೆ ಹಾಕಲಾಯಿತು. ಅದು ಅನುಷ್ಠಾನಗೊಂಡಿರಲಿಲ್ಲ. ನಾಗಣ್ಣನಂತಹ ನಾಯಕರು ನಮ್ಮ ಮೇಲೆ ಒತ್ತಡ ತಂದರು. ಇದರಿಂದ ಕಾಡುಗೊಲ್ಲರನ್ನು ಪ್ರವರ್ಗ-1ಕ್ಕೆ ಸೇರಿಸಲು ಅವಕಾಶವಾಯಿತು.
ಈಗ ಕಾಡುಗೊಲ್ಲ ಸಮುದಾಯವನ್ನು ಎಸ್.ಟಿಗೆ ಸೇರಿಸಬೇಕೆಂಬ ಬೇಡಿಕೆ ಇದೆ. ಈಗಾಗಲೇ ಸರ್ಕಾರ ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ಶಿಫಾರಸ್ಸು ಮಾಡಿದೆ. ಆದರೆ ತಾಂತ್ರಿಕ ಸಮಸ್ಯೆ ಇದೆ ಎಂಬ ಕಾರಣಕ್ಕೆ ಅದು ವಾಪಸ್ ಬಂದಿದೆ. ಅದನ್ನು ಸರಿಪಡಿಸಿ ಕಳಿಸಬೇಕಿದೆ. ಹೀಗಾಗಿ ಸಾಮಾಜಿಕ ನ್ಯಾಯ ಸಮಿತಿ ಸರ್ಕಾರದ ಮೇಲೆ ಒತ್ತಡವನ್ನು ತಂದು ಮತ್ತೆ ಕಳಿಸುವ ಕೆಲಸ ಮಾಡುತ್ತೇವೆ.
ಕಾಡುಗೊಲ್ಲರನ್ನು ಅಲೆಮಾರಿ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಇದನ್ನು ಈಡೇರಿಸಲು ಗಂಭೀರವಾಗಿ ಪ್ರಯತ್ನಿಸುತ್ತಿದ್ದೇವೆ. ಈ ಸರ್ಕಾರದ ಅವಧಿಯಲ್ಲೇ ಈ ಎರಡು ಕೆಲಸಗಳು ಆಗಲಿವೆ ಎಂಬುದು ನಮ್ಮ ನಂಬಿಕೆ. ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿರುವ ಕಾಡುಗೊಲ್ಲರು, ಹಟ್ಟಿಗೊಲ್ಲರಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಅವರಿಗೆ ಯಾವುದೇ ಸವಲತ್ತುಗಳು ಸಿಕ್ಕಿಲ್ಲ. ಅನುದಾನಗಳು ಸಿಕ್ಕಿಲ್ಲ. ಈ ಸಮಸ್ಯೆಗಳನ್ನು ಸರಿಪಡಿಸಬೇಕಾದರೆ, ಆಯೋಗ ಮಾಡುವುದರಿಂದ ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಲಿಗರ ಹೊನ್ನಯ್ಯ, ಪಿ.ಎಂ.ಕುಮಾರ್, ಪಿ.ಎನ್.ಛಮನ್ ಪರ್ಜಾನ, ಪದ್ಮ ಶಿವಮೊಗ್ಗ ನಾಗರಾಜು, ಸಾಮಾಜಿಕ ನ್ಯಾಯ ಸಮಿತಿಯ ಜಿ.ಕೆ.ನಾಗಣ್ಣ, ಉಜ್ಜಜ್ಜಿ ರಾಜಣ್ಣ ಇದ್ದರು.


