ಎಸ್.ಸಿ.ಪಿ/ಟಿಎಸ್.ಪಿ ಕ್ರಿಯಾ ಯೋಜನೆಯಡಿ ಈ ಸಾಲಿನಲ್ಲಿ ಸುಮಾರು 34,293 ಕೋಟಿ ಅನುದಾವನ್ನು ದಲಿತ ಕೇಂದ್ರಿತ ಅಭಿವೃದ್ಧಿಗೆ ವಿನಿಯೋಗಿಸಲು ಎಲ್ಲಾ ಇಲಾಖೆಗಳ ವಿವರವಾದ ಕರಡು ಕ್ರಿಯಾ ಯೋಜನೆಯ ಕುರಿತು ಚರ್ಚಿಸಿ ಅನುಮೋದನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ SCP/TSP ಕ್ರಿಯಾ ಯೋಜನೆ ಅನುಮೋದಿಸುವ ಕುರಿತ ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ₹2,349 ಕೋಟಿ ವೆಚ್ಚದ SCP/TSP ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರತಿ ಗ್ರಾಮದಲ್ಲೂ ಶೋಷಿತ ಸಮುದಾಯಗಳಿಗೆ ಸ್ಮಶಾನ ಭೂಮಿ ಒದಗಿಸುವುದು, ಶೋಷಿತ ಸಮುದಾಯಗಳ ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹಾಸ್ಟೆಲ್ ಹಾಗೂ ಶಾಲೆಗಳಿಗೆ ಅಗತ್ಯ ಜಾಗವನ್ನು ಒದಗಿಸುವುದು, ವಿದ್ಯಾರ್ಥಿಗಳಿಗೆ ಬಾತ್ ರೂಂ ಕಿಟ್ ವಿತರಣೆಗೆ ಆದ್ಯತೆ ನೀಡಲಾಗಿದೆ ಎಂದು ಭರವಸೆ ನೀಡಿದ್ದಾರೆ.
ಈ ಅನುದಾನದ ಸಮರ್ಪಕ ಬಳಕೆಗೆ ಪ್ರತಿ ಮೂರು ತಿಂಗಳಿಗೆ ಕಡ್ಡಾಯ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ ವಸತಿ ಶಾಲೆಗಳ ಅತ್ಯುತ್ತಮ ನಿರ್ವಹಣೆಗೆ ರೇಣುಕಾ ಚಿದಂಬರಂರವರ ನೇತೃತ್ವದ ಸಮಿತಿ ವರದಿ ನೀಡಿದ್ದು, ಅದನ್ನು ಪರಿಗಣಿಸಲು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿದ್ದಾರೆ.
ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದ್ದು, ಸಮಾಜಕ್ಕೆ ನಾವು ಕೊಟ್ಟ ಮಾತಿನಂತೆ ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲಿದ್ದೇವೆ ಎಂದು ತಿಳಿಸಿದ್ದಾರೆ.


