ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಅಕ್ಕಿಯ ಕೊರೆತೆ ಇರುವ ಕಾರಣದಿಂದ ಐದು ಕೆಜಿ ಅಕ್ಕಿ ವಿತರಿಸಿ ಇನ್ನುಳಿದ ಐದು ಕೆಜಿ ಅಕ್ಕಿ ಬದಲಿಗೆ ಹಣವನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಒಬ್ಬರಿಗೆ ಹತ್ತು ಕೆಜಿ ಅಕ್ಕಿ ನೀಡಲು ಅಕ್ಕಿಯ ಕೊರತೆ ಇದೆ. ಹಾಗಾಗಿ ಪ್ರತಿ ಕೆಜಿ ಅಕ್ಕಿಗೆ 34 ರೂಗಳಂತೆ ಪ್ರತಿ ವ್ಯಕ್ತಿಗೆ 170 ರೂಗಳನ್ನು ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜುಲೈ ಒಂದರಿಂದ ಪ್ರತಿ ವ್ಯಕ್ತಿಗೆ ಐದು ಕೆಜಿ ಅಕ್ಕಿ ನೀಡಲಾಗುತ್ತದೆ ಮತ್ತು ಉಳಿದ ಅಕ್ಕಿಗೆ ಬದಲು ಹಣ ಕೊಡಲಾಗುವುದು. ಬಿಪಿಎಲ್ ಕಾರ್ಡ್ ನಲ್ಲಿ ಎಷ್ಟು ಜನರಿರುತ್ತಾರೋ ಅವರಿಗೆಲ್ಲ ಪ್ರತಿಯೊಬ್ಬರಿಗೂ 170 ರೂ ನೀಡಲಾಗುತ್ತದೆ. ಅಕ್ಕಿ ಸಿಗುವ ತನಕವೂ ಇದು ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಈ ಬಗ್ಗೆ ಕೇಂದ್ರದ ಬಳಿ ದುಡ್ಡು ಕೊಡುತ್ತೇವೆ ಅಕ್ಕಿ ಕೊಡಿ ಎಂದು ಕೇಳಿಕೊಂಡಿವೆ. ಆದರೆ ಕೇಂದ್ರ ಸರ್ಕಾರ ಅಕ್ಕಿ ಕೊಡದೇ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಮ್ಮ ಯೋಜನೆಗೆ ಅಕ್ಕಿ ಕೊಡುವುದಾಗಿ ಭಾರತೀಯ ಆಹಾರ ನಿಗಮ ಒಪ್ಪಿಗೆ ನೀಡಿತ್ತು. ಆದರೆ ಕೇಂದ್ರ ಸರ್ಕಾರದ ಒತ್ತಾಯದ ಮೇರೆಗೆ ಎಫ್.ಸಿ.ಐ ಅಕ್ಕಿ ಕೊಡಲು ನಿರಾಕರಿಸಿತು. ಹಾಗಾಗಿ ಆಂದ್ರಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ಛತ್ತೀಸ್ ಗಡ ಸರ್ಕಾರಗಳಿಗು ಮನವಿ ಮಾಡಿದೆವು ಎಂದರು.
ಆದರೆ ಅಕ್ಕಿ ಕೊರತೆ, ಬೆಲೆ ಏರಿಕೆ ಮತ್ತು ಅಗತ್ಯ ಅಕ್ಕಿ ಪೂರೈಕೆ ಸಾಧ್ಯವಿಲ್ಲದ ಕಾರಣದಿಂದ ಕೈಬಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


