Monday, March 16, 2026
Google search engine
Homeಮುಖಪುಟಮಾದಿಗ ಸಮುದಾಯಕ್ಕೆ ವಿಧಾನಪರಿಷತ್ ಸದಸ್ಯ ಸ್ಧಾನ ನೀಡಲು ಆಗ್ರಹ

ಮಾದಿಗ ಸಮುದಾಯಕ್ಕೆ ವಿಧಾನಪರಿಷತ್ ಸದಸ್ಯ ಸ್ಧಾನ ನೀಡಲು ಆಗ್ರಹ

ತುಮಕೂರು ಜಿಲ್ಲೆಯ ಮಾದಿಗ ಸಮುದಾಯಕ್ಕೆ ರಾಜಕೀಯ ಶಕ್ತಿ ಬರುವುದು ಯಾವಾಗ? ಎನ್ನುವ ಪ್ರಶ್ನೆ ಕಳೆದ ಎರಡು ಮೂರು ದಶಕಗಳಿಂದಲೂ ಬಹು ಸಂಖ್ಯಾತರಾದ ಮಾದಿಗರನ್ನು ಕಾಡುತ್ತಿದೆ. ಕರ್ನಾಟಕ ರಾಜ್ಯಕ್ಕೆ ಮೊದಲ ದಲಿತ ಮಂತ್ರಿ ಆರ್.ಚನ್ನಿಗರಾಮಯ್ಯ ಅವರನ್ನು ಕೊಟ್ಟ ಮಾದಿಗ ಸಮುದಾಯ ಇಂದು ತಬ್ಬಲಿತನವನ್ನು ಅನುಭವಿಸುತ್ತಿರುವುದು ಶೋಚನೀಯ ಸಂಗತಿ ಎಂದು ಮಾತಂಗ ಸಾಂಸ್ಕೃತಿಕ ಮತ್ತು ಸಂಶೋಧನಾ ಕೇಂದ್ರ ಕಾರ್ಯದರ್ಶಿ ಡಾ. ಹನುಮಂತರಾಯಪ್ಪ ಮತ್ತು ಅಧ್ಯಕ್ಷ ಡಾ.ಶಿವಣ್ಣ ತಿಮ್ಲಾಪುರ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ನಮ್ಮ ಸಮುದಾಯದ ಪಾತ್ರ ದೊಡ್ಡದು. ತುಮಕೂರು ಜಿಲ್ಲೆಯಲ್ಲಿ ಹನ್ನೊಂದು ಕ್ಷೇತ್ರಗಳ ಪೈಕಿ ಏಳು ಸ್ಥಾನಗಳನ್ನು ಗೆಲ್ಲಿಸಿ ಕೊಟ್ಟು ಇಬ್ಬರು ಮಂತ್ರಿಗಳನ್ನು ಮಾಡುವಲ್ಲಿ ನಮ್ಮದು ಸಿಂಹ ಪಾಲಿದೆ. ದುರಂತವೆಂದರೆ ಹನ್ನೊಂದು ಕ್ಷೇತ್ರಗಳಲ್ಲಿ ಎರಡು ಮೀಸಲು ಕ್ಷೇತ್ರಗಳಿವೆ. ಈ ಎರಡು ಕ್ಷೇತ್ರಗಳಲ್ಲಿಯೂ ಮಾದಿಗರಿಗೆ ಟಿಕೇಟ್ ನೀಡದೆ ವಂಚಿಸಿರುವುದು ದುರದುಷ್ಟಕರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಮುದಾಯ ಇನ್ನೆಷ್ಟು ಸಹನೆಯಿಂದ ಇರಲು ಸಾಧ್ಯ? ಈ ಜಿಲ್ಲೆಯಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಎಡಗೈ ಮತದಾರರು ಇರುವ ಈ ಸಮುದಾಯಕ್ಕೆ ಘೋರ ಅನ್ಯಾಯವಾಗಿದೆ. ಆದ್ದರಿಂದ ಮುಂದಿನ ತಿಂಗಳು ಖಾಲಿಯಾಗಲಿರುವ ಮೂರು ವಿಧಾನ ಪರಿಷತ್ತು ಸ್ಥಾನಗಳ ಪೈಕಿ ತುಮಕೂರು ಜಿಲ್ಲೆಯಿಂದ ಮಾದಿಗ ಸಮುದಾಯದ ಒಬ್ಬರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ ಈ ಜಿಲ್ಲೆಗೆ ಮತ್ತು ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯಾಯ ನೀಡದ ಪಕ್ಷದಲ್ಲಿ ಮುಂದಿನ ಲೋಕಸಭಾ ಚುನಾವಣೆಯಿಂದ ದೂರವಿರುವ ಪ್ರತಿಜ್ಞೆಯನ್ನು ಈ ಸಮುದಾಯ ಮಾಡಬೇಕಾಗುತ್ತದೆ ಎನ್ನುವ ಸಂಗತಿಯನ್ನು ನಮ್ಮ ಜಿಲ್ಲೆಯ ಇಬ್ಬರು ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಇದನ್ನು ಗಮನಿಸಬೇಕು. ಈ ಇಬ್ಬರು ಮಂತ್ರಿಗಳಿಗೆ ನಮ್ಮ ಸಮುದಾಯದಿಂದ ರಾಜಕೀಯ ಲಾಭ ಆಗಿದೆ. ಆದ್ದರಿಂದ ಉಭಯ ಸಚಿವರು ಮಾದಿಗ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular