ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆ ಮಾಡದ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜೂನ್ 18ರಂದು ತುಮಕೂರಿನ ಟೌನ್ ಹಾಲ್ ನಲ್ಲಿ ಭತ್ತ, ರಾಗಿ, ಜೋಳದ ರಾಶಿಯನ್ನು ಮಾಡಿ ಪೂಜೆ ಸಲ್ಲಿಸುವ ಮೂಲಕ ವಿನೂತನ ಪ್ರತಿಭಟನೆಯನ್ನು ಮಾಡಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು ಮತ್ತು ಮುಖಂಡರು ಚೀಲಗಳಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಇಟ್ಟು ಪೂಜೆ ಸಲ್ಲಿಸಿ ಭಾರತೀಯ ಆಹಾರ ನಿಗಮಕ್ಕೆ ಕಳುಹಿಸುವ ವಿನೂತನ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ, ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಆಹಾರ ನಿಗಮವು ಅಕ್ಕಿ ಖರೀದಿಗೆ ಅವಕಾಶ ನೀಡಿ, ನಂತರ ನಿರಾಕರಿಸಿರುವುದು ಖಂಡನೀಯ, ಇದನ್ನು ನೋಡಿದರೆ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದ್ದು, ಬಡವರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯದ 1.28 ಕೋಟಿ ಕುಟುಂಬಗಳು ಸುಮಾರು 4.42 ಕೋಟಿ ಜನರು ಫಲಾನುಭವಿಗಳಾಘಿದ್ದಾರೆ. ಸರ್ಕಾರ ಇದಕ್ಕೆ ಬೇಕಾಗುವ 11,000 ಕೋಟಿ ನೀಡಲು ಸಿದ್ದವಿದ್ದರೂ ಸಹ ಮೋದಿ ಸರ್ಕಾರ ಭಾರತೀಐ ಆಹಾರ ನಿಗಮಕ್ಕೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡದಂತೆ ನಿರ್ದೇಶನ ನೀಡಿದೆ. ಭಾರತೀಯ ಆಹಾರ ನಿಗಮದ ಬಳಿ ಹೆಚ್ವುವರಿ ಅಕ್ಕಿ ದಾಸ್ತಾನು ಇದೆ. ಆದರೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡಲು ಸಿದ್ದವಿಲ್ಲ. ಆದರೂ ಎಫ್.ಸಿ.ಐ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಭಾರತೀಯ ಆಹಾರ ನಿಗಮ ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಮಿಟ್ ಮೆಂಟ್ ಪತ್ರ ತೋರಿಸಲಿ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹಾಗೂ ಹಲವು ಮಂದಿ ಲೋಕಸಭಾ ಸದಸ್ಯರು ಸವಾಲು ಹಾಕಿದ್ದರು. ಪತ್ರ ತೋರಿಸಿದ ಬಳಿಕ ಉಸಿರೇ ನಿಂತು ಹೋಗಿದೆ ಎಂದು ಲೇವಡಿ ಮಾಡಿದರು.
ಮಾಜಿ ಶಾಸಕ ಲಕ್ಕಪ್ಪ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಗೆ ತೊಂದರೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಅಕ್ಕಿ ಕೊಡಲು ತಿರಸ್ಕರಿಸಿರುವುದು ಖಂಡನೀಯ. ಹಸಿದ ಜನತೆಗೆ ಅನ್ನ ಕೊಡುವುದು ಸರ್ಕಾರ ಮತ್ತು ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅದರ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಚ್.ನಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುಖಂಡರಾದ ಷಣ್ಮುಖಪ್ಪ, ರೆಡ್ಡಿಚಿನ್ನಯಲ್ಲಪ್ಪ, ಸಿದ್ದಲಿಂಗೇಗೌಡ, ಎಚ್.ಸಿ.ಹನುಮಂತಯ್ಯ, ರೇವಣ ಸಿದ್ದಯ್ಯ, ತರುಣೇಶ್, ನರಸೀಯಪ್ಪ, ಆಟೋರಾಜು, ಮಂಜುನಾಥ್, ಕೃಷ್ಣೇಗೌಡ, ಡಾ.ವನಿತಾ, ಮರಿಚನ್ನಮ್ಮ, ವಾಲೆಚಂದ್ರು, ನರಸಿಂಹಯ್ಯ, ಸೌಭಾಗ್ಯಮ್ಮ, ಮಂಜುಳಮ್ಮ, ಕಮಲಮ್ಮ, ರಾಜಪ್ಪ, ಪಾಲಿಕೆ ಸದಸ್ಯ ಮಹೇಶ್, ಸುಮಾ, ಕವಿತಾ ಅನ್ನಪೂರ್ಣ, ಗೀತಾ, ಯಶೋಧಮ್ಮ, ಸೇರಿದಂತೆ ಹಲವು ಮುಖಂಡರು ಇದ್ದರು.


