ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನವೀಕರಣಗೊಂಡಿರುವ ಮಹಾತ್ಮಗಾಂಧಿ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದ್ದು, ಕ್ರಿಡಾಪಟುಗಳಿಗೆ, ಕ್ರೀಡಾಸಕ್ತರಿಗೆ, ಕ್ರೀಡಾ ಪೋಷಕರಿಗೆ ನಿರಾಸೆ ಮೂಡಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.
ಇತ್ತೀಚೆಗೆ ಕ್ರೀಡಾಪಟುಗಳು, ಕ್ರೀಡಾಪೋಷಕರು, ಕಾಂಗ್ರೆಸ್ ಮುಖಂಡರೊಂದಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಂಗಣದ ಪರಿಶೀಲನೆಗೆ ಜಿಲ್ಲಾಡಳಿತದ ಪರವಾಗಿ ಆಗಮಿಸಿದ್ದ ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಅವರಿಗೆ ಸಮಸ್ಯೆಗಳ ಆಗರವನ್ನು ಮುಂದಿಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ, ಕ್ರೀಡಾಂಗಣಕ್ಕೆ 65 ಕೋಟಿ ಬೇಸಿಕ್ ಹಣ ಬಿಡುಗಡೆಯಾದರೂ ಅದನ್ನು ಸಮರ್ಪಕವಾಗಿ ಉಪಯೋಗಿಸದೆ ಕ್ರೀಡಾಪಟುಗಳಿಗೆ ಅಗತ್ಯವಾಗಿ ಬೇಕಾಗಿರುವಂತಹ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಸೆಕ್ಯುರಿಟಿ ವ್ಯವಸ್ಥೆ, ವಿದ್ಯುತ್ ದೀಪದ ವ್ಯವಸ್ಥೆ, ಸ್ವಚ್ಚತೆ ಇಲ್ಲದೇ ಇರುವುದು ಬೇಸರ ತರಿಸಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಹಾಗಾಗಿ ಉಪವಿಬಾಗಾಧಿಕಾರಿಗಳು ಇದರ ಉಸ್ತುವಾರಿ ವಹಿಸಿದ್ದು, ಬೆಂಗಳೂರಿಗೆ ಸಮೀಪದಲ್ಲಿರುವ, ವಿಮಾನ ನಿಲ್ದಾಣಕ್ಕೆ ಸಮೀಪವಿರುವ ತುಮಕೂರಿನ ಅಂತರಾಷ್ಟ್ರೀಯ ಮಹಾತ್ಮಗಾಂಧಿ ಕ್ರೀಡಾಂಗಣ ಎಲ್ಲಾ ಕ್ರೀಡಾಪಟುಗಳಿಗೆ ಸದ್ವಿನಿಯೋಗವಾಗಬೇಕು, ಇಲ್ಲಿ ಇಂಡೋರ್ ಸ್ಟೇಡಿಯಂನ್ನು ಕಲ್ಯಾಣ ಮಂಟಪದ ರೀತಿಯಲ್ಲಿ ಮಾಡಿದ್ದಾರೆ. ಇಂತಹ ಸ್ಟೇಡಿಯಂ ಯಾವುದೇ ರೀತಿಯಲ್ಲೂ ಉಪಯೋಗಕ್ಕೆ ನೀಡದೆ ಬೀಗ ಹಾಕಿದ್ದಾರೆ ಎಂದು ಗಮನ ಸೆಳೆದದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ರಾಷ್ಟ್ರೀಯ ಕ್ರೀಡಾಪಟು ಅನಿಲ್, ಗುತ್ತಿಗೆದಾರ ಗುರು, ತುಮಕೂರು ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಅಂತರಾಷ್ಟ್ರೀಯ ಕ್ರೀಡಾಪಟು ಟಿ.ಕೆ.ಆನಂದ್, ಮುಖಂಡರಾದ ರೇವಣ್ಣ ಸಿದ್ಧಯ್ಯ, ತರುಣೇಶ್, ಸಿದ್ಧಲಿಂಗೇಗೌಡ, ಗೋವಿಂದೇಗೌಡ, ನಟರಾಜು, ಡಾ.ಅರುಂಧತಿ, ರಂಗಸ್ವಾಮಿ, ವಾಲೆಚಂದ್ರು, ಮಂಜುನಾಥ್, ಷಣ್ಮುಖಪ್ಪ ಭಾಗವಹಿಸಿದ್ದರು.


