ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳ ಈ ನಿರ್ಧಾರ ಸ್ವಾಗತಾರ್ಹ. ಗೃಹ ಸಚಿವರು ಇದನ್ನೇ ಪಾಲಿಸಲಿ ಎಂದು ನೆಟ್ಟಿಗರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೀರೋ ಟ್ರಾಫಿಕ್ ನಿರಾಕರಿಸಿರುವುದು ಒಳ್ಳೆಯ ನಿರ್ಧಾರ. ಗೃಹ ಸಚಿವರಾಗುವವರೂ ಮುಖ್ಯಮಂತ್ರಿ ಯವರನ್ನು ಅನುಸರಿಸಿ ಜೀರೋ ಟ್ರಾಫಿಕ್ ನಿರಾಕರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕುಮಾರ್ ದಿನೂ ಒತ್ತಾಯಿಸಿದ್ದಾರೆ.

ರಂಗಭೂಮಿ ಕಲಾವಿದ ಸುರೇಂದ್ರ ರಾವ್, ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ತೀರ್ಮಾನವೇನೋ ಒಳ್ಳೆಯದೇ, ಆದರೆ ಈ ತೀರ್ಮಾನ ಎಷ್ಟು ದಿನ ಇರುತ್ತೆ ಎನ್ನುವುದು ಅನುಮಾನ. ಇದು ಪ್ರಾಯೋಗಿಕ ನಿರ್ಧಾರವಲ್ಲ ಎಂದು ಮಾತ್ರ ಹೇಳಬಹುದು. ಅಂತಹ ವಿಶೇಷ ಸೌಲಭ್ಯ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಮಾತ್ರ ಇರಬೇಕು ಅಷ್ಟೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹ. ಇದು ಒಳ್ಳೆಯ ಬೆಳವಣಿಗೆ ಎಂದು ಸೀನಾ ಎಂಬುವರು ಹೇಳಿದ್ದಾರೆ. ಹಲವರು ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಅನ್ನು ಹಂಚಿಕೊಂಡಿರುವ ನೆಟ್ಟಿಗರು ಸಿದ್ದರಾಮಯ್ಯ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.


