ಹಾಡಹಗಲೇ ಬಸ್ ನಿಲ್ದಾಣದಲ್ಲಿ ಚಾಲಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕೆಕೆಆರ್ಟಿಸಿ ಬಸ್ ಚಾಲಕ ನಾಗಯ್ಯಸ್ವಾಮಿ (45) ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೂಲತಃ ಅಫಜಲಪುರ ತಾಲೂಕಿನ ಮದರಿ ಗ್ರಾಮದ ನಾಗಯ್ಯಸ್ವಾಮಿ, ಸದ್ಯ ಕಲಬುರಗಿಯ ಮಹಾದೇವ ನಗರದಲ್ಲಿ ವಾಸವಿದ್ದರು.
ಕಳೆದ 20 ವರ್ಷಗಳಿಂದ ಬಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ನಾಗಯ್ಯಸ್ವಾಮಿ, ಕಲಬುರಗಿ ಡಿಪೋ ಸಂಖ್ಯೆ 3ರಲ್ಲಿ ಸೂಪರ್ ಮಾರ್ಕೆಟ್ನಿಂದ ಮಿನಜಗಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಸಹ ಬೆಳಗ್ಗೆಯಿಂದ ಎರಡು ರೌಂಡ್ ಮಿನಜಗಿಗೆ ಹೋಗಿ ಬಂದಿದ್ದರು. ಮಧ್ಯಾಹ್ನ 1-30 ರ ಸುಮಾರಿಗೆ ಮಿನಜಗಿಯಿಂದ ಕಲಬುರಗಿ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಚಲಾಯಿಸಿಕೊಂಡು ಬಂದಿದ್ದಾರೆ.
ಬಸ್ ನಿಲ್ದಾಣದಲ್ಲಿ ಬಸ್ನಿಂದ ಕೆಳಗೆ ಇಳಿಯುತ್ತಿದ್ದಂತೆ. ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಕೈ ಹೆಬ್ಬೆರಳು ತುಂಡಾಗಿದ್ದಂತೆ ಬಸ್ ನಿಲ್ದಾಣ ಒಳಗೆ ಓಡಿದ ನಾಗಯ್ಯಸ್ವಾಮಿಯನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ. ಹೋಗುವಾಗ ಕೊಂಚ ದೂರದಲ್ಲಿ ನಿಂತಿದ್ದ ಬಸ್ವೊಂದರ ಬಳಿ ಮಾರಕಾಸ್ತ್ರ ಎಸೆದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಡಿಸಿಪಿ ಆಡೂರು ಶ್ರೀನಿವಾಸಲು, ಬ್ರಹ್ಮಪುರ ಠಾಣೆ ಪೊಲೀಸರು, ಬೆರಳಚ್ಚು, ಡಾಗ್ ಸ್ಕ್ಯಾ ಡ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೊಲೆಗೆ ಹಳೆ ವೈಷಮ್ಯ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.


