ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಸಾರ್ವಜನಿಕ ಸ್ವತ್ತುಗಳನ್ನು ಮಾರಾಟ ಮಾಡದೆ ಕಾಪಾಡಿಕೊಂಡು ಬಂದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ನಾವಿಬ್ಬರು, ನಮಗಿಬ್ಬರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ತುಮಕೂರಿನ ಜೆಡಿಎಸ್ ಕಚೇರಿಯಲ್ಲಿಂದು ಕಾಂಗ್ರೆಸ್ ತೊರೆದ ಮಾಜಿ ಶಾಸಕ ಎಸ್.ಷಫಿ ಅಹಮದ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡ ನಂತರ ಅವರು ಮಾತನಾಡಿ, ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ವತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ ಅಂಬಾನಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಗುಲಾಭ್ ನಭಿ ಅಜಾದ್ ಮತ್ತು ಜಾಫರ್ ಷರೀಫ್ ಅವರನ್ನು ಮೂಲೆಗುಂಪು ಮಾಡಿದರು. ಅಂಧವರನ್ನೇ ಬಿಡದ ಕಾಂಗ್ರೆಸ್ ಇನ್ನು ನಿಮ್ಮನ್ನು ಬಿಡುತ್ತಾರಾ ಎಂದು ಆರೋಪಿಸಿದರು.
ಇಂದು ಮುಸ್ಲೀಂ ಸಮಾಜದ ಶೇ70ರಷ್ಟು ಮಂದಿ ಹುಷಾರಾಗಿದೆ. ಅದೊಂದು ಕಾಲವಿತ್ತು. ಹಿಂದೆ ಮುಸ್ಲೀಮರು, ದಲಿತರ ಮೇಲೆ ದಾಳಿ ನಡೆಯುತ್ತಿತ್ತು. ಇದು ಈಗ ಕಡಿಮೆಯಾಗಿದ್ದು ಇಂದಿನ ಜನ ಮೊಬೈಲ್ ನಲ್ಲಿ, ದೃಶ್ಯಮಾಧ್ಯಮದ ಮೂಲಕ ಜಗತ್ತನ್ನು ಕೆಲವೇ ನಿಮಿಷಗಳಲ್ಲಿ ನೋಡುತ್ತಿದೆ ಎಂದರು.
ಜೆಡಿಎಸ್ ಒಂದು ಪಕ್ಷ. ಇಲ್ಲಿ ನಮಗಾಗಿ ಏನು ಮಾಡಿದೆಯೋ ಎನ್ನುವುದು ಮುಖ್ಯವಲ್ಲ. ನಾವು ಪಕ್ಷಕ್ಕೆ ಏನು ಮಾಡಿದೆ ಎಂಬುದು ಮುಖ್ಯ. ಹಾಗಾಗಿ ಪಕ್ಷಕ್ಕಾಗಿ ನಾವು ಕೆಲಸ ಮಾಡಬೇಕು. ಟಿಕೆಟ್ ಗಾಗಿ ದೆಹಲಿಗೆ ಅಲೆಯಬೇಕಾಗಿಲ್ಲ. ಕಾಯಬೇಕಾಗಿಲ್ಲ. ಟಿಕೆಟ್ ಗಾಗಿ ಕಪ್ಪ ಕೊಡಬೇಕಾಗಿಲ್ಲ. ಜನತಾ ದಳ ಏನು ತೀರ್ಮಾನ ಮಾಡುತ್ತೋ ಅದೇ ಮುಖ್ಯ ಎಂದು ಹೇಳಿದರು.
ಬಹಳ ಹಿಂದೇಯೇ ಷಫೀ ಅಹಮದ್ ಅವರಿಗೆ ಹೇಳಿದ್ದೆ. ಜನತಾ ದಳಕ್ಕೆ ಬರುವಂತೆ ಕರೆದಿದ್ದೆ. ಈಗ ಬಂದಿದ್ದಾರೆ. ಅವರ ಸ್ನೇಹಿತರು ಬೆಂಬಲಿಗರು ಬಂದಿದ್ದಾರೆ. ನಮ್ಮದು ರೈತರ ಪಕ್ಷ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ತುಮಕೂರಿಗೆ ಕೆರೆತಂದು ಸೋಲಿಸಿದರು. ಸೋಲಿಸಿದವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಟ ಕಲಿಸಲಿದ್ದಾರೆ. ನಮ್ಮ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದರು.


