ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಮತ್ತು ಅಭಿವೃದ್ದಿ ಎಂಬ ಐದು ಅಂಶಗಳನ್ನು ಮುಂದಿಟ್ಟುಕೊಂಡು,ಕಾಂಗ್ರೆಸೇ ಪರಿಹಾರ ಎಂಬ ಘೋಷ ವಾಕ್ಯದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮೇಲಿನ ಪಂಚಮಂತ್ರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅಡಳಿತದಲ್ಲಿರುವ ಬಿಜೆಪಿಯ ಜನವಿರೋಧಿ ನೀತಿಗಳಿಂದ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರು ದಿನದೂಡುವುದೇ ಕಷ್ಟವಾಗಿದೆ. ಹಾಗಾಗಿ ಕಾಂಗ್ರೆಸ್ ಪ್ರತಿ ಮನೆಯ ಗೃಹಿಣಿಗೆ ಮಾಸಿಕ 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತದ ಗೃಹಜ್ಯೋತಿ, ಪ್ರತಿ ಪಡಿತರದಾರರಿನಿಗೆ ತಲಾ 10 ಕೆ.ಜಿ.ಅನ್ನಭಾಗ್ಯ, ನಿರುದ್ಯೋಗಿ ಯುವಕರಿಗಾಗಿ ಪದವಿಧರರಿಗೆ ಮಾಸಿಕ 3000 ರೂ, ಡಿಪ್ಲಮೋದವರಿಗೆ ತಲಾ 1500 ರೂ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾಋದ ಅವಧಿಯಲ್ಲಿ ಜಾರಿಗೆ ತಂದ ಉದ್ಯೋಗಖಾತ್ರಿ, ಆಹಾರ ಭದ್ರತಾ ಕಾಯ್ದೆ, ಆರ್.ಟಿ.ಇ, ಆರ್.ಟಿ.ಐ ನಿಂದ ದೇಶದ ಕೋಟ್ಯಂತರ ರೂಗಳ ಸಹಕಾರ ಪಡೆದಿವೆ. ಇಂದಿಗೂ ಗ್ರಾಮೀಣ ಭಾಗದ ಜನರನ್ನು ಉದ್ಯೋಗ ಖಾತ್ರಿ ಯೋಜನೆ ಪೊರೆಯುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ 2013ರಿಂದ 18ರವರೆಗಿನ ಸರ್ಕಾರದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಶೂಭಾಗ್ಯ ಸೇರಿದಂತೆ ಹಲವಾರು ಯೋಜನೆಗಳು ಲಕ್ಷಾಂತರ ಜನರನ್ನು ತಲುಪಿವೆ. ಇವುಗಳ ಬಗ್ಗೆ ಹೆಚ್ಚು ಪ್ರಚಾರವನ್ನು ಕಾಂಗ್ರೆಸ್ ಪ್ರಚಾರ ಸಮಿತಿ ನಡೆಸುವ ಜೊತೆಗೆ, ಬಿಜೆಪಿಯ ಜನವಿರೋಧಿ ನೀತಿಗಳನ್ನು ಜನರ ಮುಂದಿಡಲಿದೆ ಎಂದರು.
ಮಾಧ್ಯಮಗೋಷ್ಟಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಇಕ್ಬಾಲ್ ಅಹಮದ್, ಚಿಕ್ಕರಂಗಯ್ಯ, ಜಯರಾಮಯ್ಯ, ಎಸ್.ಎಲ್.ಎನ್.ಸ್ವಾಮಿ, ಜಿಲ್ಲಾ ಸಂಯೋಜಕರಾದ ರಾಜಕುಮಾರ್, ಚಕ್ರವರ್ತಿ ಪ್ರಕಾಶ್, ಸಿ.ಭಾನುಪ್ರಕಾಶ್, ಮಾರುತಿ, ದೊಡ್ಡಯ್ಯ, ಜಗದೀಶ್, ಮಳೇಹಳ್ಳಿ ಮಲ್ಲಿಕಾರ್ಜುನ,ಕಲ್ಲಹಳ್ಳಿ ಮಹಾಲಿಂಗಪ್ಪ, ಹೇರೂರು ಗುರುಪ್ರಸಾದ್, ರೇಣುಕಯ್ಯ ಉಪಸ್ಥಿತರಿದ್ದರು.


