ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ವರಿಷ್ಠರು ಸೂಕ್ತ ಅಭ್ಯರ್ಥಿಗಳನ್ನು ಆರಿಸಿಯೇ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಬೇರೆ ಪಕ್ಷಗಳಂತೆ ಇಲ್ಲಿ ಅವ್ಯವಸ್ಥಿತವಾಗಿ ಏನೂ ನಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಏಪ್ರಿಲ್ 13 ರ ತನಕ ಸಮಯ ಇದೆ. ಚುನಾವಣೆಯಲ್ಲಿ ರಣತಂತ್ರ ಮಾಡಬೇಕಾಗುತ್ತದೆ. ಎಲ್ಲರಿಗಿಂತ ಮೊದಲು ಪಟ್ಟಿ ಬಿಡುಗಡೆ ಮಾಡಿದಾಕ್ಷಣ ಗೆಲ್ಲುತ್ತೇವೆ ಎಂದರ್ಥವಲ್ಲ. ಬಿಜೆಪಿಗೆ ತನ್ನದೇ ಆದ ತಂತ್ರವಿದೆ. ಅಭ್ಯರ್ಥಿಗಳ ನಡುವೆ ಜಗಳ, ಚೇರ್ಗಳು ಮುರಿದುಹೋಗುವಂತಹ ಘಟನೆಗಳು ಬೇರೆ ಪಕ್ಷಗಳಲ್ಲಿ ನಡೆಯುತ್ತಿದೆ. ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಎಲ್ಲವೂ ಶಿಸ್ತುಬದ್ಧವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ಯಾರೋ ಪ್ರಣಾಳಿಕೆಯನ್ನು ಬರೆದುಕೊಟ್ಟು, ಅದನ್ನು ಒಂದನೇ ಗ್ಯಾರಂಟಿ, ಎರಡನೇ ಗ್ಯಾರಂಟಿ ಎಂದು ಓದುತ್ತಾ ಹೋದರು. ಬಿಜೆಪಿ ಈ ರೀತಿ ಮಾಡಿಲ್ಲ. ಪ್ರಣಾಳಿಕೆ ರೂಪಿಸಲು ಬಿಜೆಪಿ ಜನರ ಮುಂದೆ ಹೋಗಿದೆ. ರೈತರು, ಸಣ್ಣ ಕೈಗಾರಿಕಾ ಉದ್ಯಮಿಗಳು, ಕಾರ್ಮಿಕರು ಮೊದಲಾದ ವರ್ಗದ ಜನರ ಕಷ್ಟಗಳನ್ನು ಆಲಿಸಿ, ಅದಕ್ಕೆ ಪೂರಕವಾಗಿ ಪ್ರಣಾಳಿಕೆ ರಚಿಸಲಾಗುತ್ತಿದೆ. ಬಿಜೆಪಿಗೂ ಕಾಂಗ್ರೆಸ್ಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣೆಯಲ್ಲಿ ಎಂದೂ ಸೋತಿಲ್ಲ. ಅವರು ಎಲ್ಲಿ ನಿಂತರೂ ಗೆಲ್ಲುತ್ತಾರೆ. ಶಿಗ್ಗಾಂವಿಯಲ್ಲಿ ಪೂರಕವಾದ ವಾತಾವರಣ ಇದೆಯೇ, ಇಲ್ಲವೇ ಎಂದು ಯಾರೂ ಹೇಳಿಲ್ಲ. ಶಿಗ್ಗಾಂವದಲ್ಲಿ ಸ್ಪರ್ಧಿಸಿದರೆ ಅತಿ ಹೆಚ್ಚು ಮತಗಳು ಬೊಮ್ಮಾಯಿಗೆ ದೊರೆಯುತ್ತದೆ. ಬೊಮ್ಮಾಯಿ ವಿರುದ್ಧ ನಿಂತುಕೊಂಡರೆ, ವಿನಯ್ ಕುಲಕರ್ಣಿಯವರು ದೊಡ್ಡ ಅಂತರದಲ್ಲೇ ಸೋಲುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವರುಣಾದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಅವರು ಕೋಲಾರದಲ್ಲಿ ಸ್ಪರ್ಧಿಸುತ್ತಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಪಟ್ಟಿಯೇನೂ ಬಿಡುಗಡೆ ಮಾಡಿಲ್ಲ. ಎರಡನೇ ಪಟ್ಟಿ ಬಿಡುಗಡೆ ಮಾಡಲು ಬಹಳ ತಡವಾಗುತ್ತಿದೆ ಎಂದರು.


