ವಾರದ ಹಿಂದೆ ಆಗಿದ್ದ ತೀರ್ಮಾನವನ್ನು ಉಲ್ಲಂಘಿಸಿ ಅರಣ್ಯ ಇಲಾಖೆ ಸಿಬ್ಬಂದಿ ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ ಗುಂಡಿ ತೋಡುವುದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗಂಗಯ್ಯನಪಾಳ್ಯದಲ್ಲಿ ನಡೆದಿದೆ.
ಲಾಠಿ ಚಾರ್ಜ್ ನಡೆಸಿರುವುದರಿಂದ ಹಲವರು ಗಂಭೀರ ಗಾಯಗೊಂಡಿದ್ದಾರೆ. ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ದೊಡ್ಡ ನಂಜಯ್ಯ ಅವರನ್ನು ಅಪಹರಿಸಲಾಗಿದೆ ಎಂದು ಸಾಗುವಳಿದಾರರು ದೂರಿದ್ದಾರೆ.
ಅರಣ್ಯ ಇಲಾಖೆಯ ನೂರಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಆಗಮಿಸಿ ಬಗರ್ ಹುಕುಂ ಭೂಮಿಯಲ್ಲಿ ಅಕ್ರಮವಾಗಿ ಟ್ರಂಚ್ ಹೊಡೆಯಲು ಆರಂಭಿಸಿದ್ದಾರೆ. ಇದನ್ನು ಪ್ರಶ್ನಿಸಿದ ರೈತರ ಮೇಲೆ ಅರಣ್ಯ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅರಣ್ಯ ಸಿಬ್ಬಂದಿ ಗಳ ಲಾಠಿ ಪ್ರಹಾರದಲ್ಲಿ ನಾಲ್ಕು ರೈತರಿಗೆ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಮಹಿಳೆಯರು ಸೇರಿದಂತೆ ಹತ್ತಾರು ರೈತರಿಗೆ ಪೆಟ್ಟಾಗಿದೆ ಎಂದು ಸಾಗುವಳಿದಾರರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಲಾಠಿ ಚಾರ್ಜ್ ಮಾಡುವ ಅಧಿಕಾರ ಕೊಟ್ಟವರು ಯಾರು? ತೀವ್ರ ಗಾಯಗೊಂಡ ರೈತರ ಜೊತೆ ಅಪಹರಿಸಿಕೊಂಡು ಹೋಗಿರುವ ದೊಡ್ಡ ನಂಜಯ್ಯ ಅವರನ್ನು ವಾಪಸ್ಸು ಕರೆತರಲು ಆಗ್ರಹಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಗುತ್ತಿದೆ.
ದೊಡ್ಡ ನಂಜಯ್ಯ ರವರನ್ನು ಕೊಲೆ ಮಾಡಿರಬಹುದಾದ ಸಂಶಯ ವ್ಯಕ್ತವಾಗುತ್ತಿದೆ. ಅಪಹರಣಕ್ಕೆ ಒಳಗಾಗಿ ಒಂದು ಗಂಟೆ ಆದರೂ ಅವರ ಸುಳಿವು ಹೇಳುತ್ತಿಲ್ಲ ಎಂದು ಸಾಗುವಳಿದಾರರು ಆಪಾದಿಸಿದ್ದಾರೆ.


