ಗಂಡು ಮಗು ಆಗಿಲ್ಲ ಎಂಬ ಕಾರಣಕ್ಕೆ ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಸೋನಹಳ್ಳಿ ಗ್ರಾಮದಲ್ಲಿ ಚಂದ್ರು ಎಂಬಾತ ತನ್ನ ಪತ್ನಿ ಶಿವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಮಾವ ರಾಮೇಗೌಡ ಹಾಗೂ ಅತ್ತೆ ಕೆಂಪಮ್ಮ ಸಹಕಾರ ನೀಡಿದ ಆರೋಪ ಕೇಳಿ ಬಂದಿದೆ.
ಶಿವಮ್ಮಗೆ ಎರಡು ಹೆಣ್ಣು ಮಕ್ಕಳಿದ್ದು ಗಂಡು ಮಗು ಬೇಕು ಎಂದು ಕಿರುಕುಳ ನೀಡಲಾಗುತ್ತಿತ್ತು. ಆದರೆ ಗಂಡು ಮಗು ಆಗದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಇದೇ ಕಾರಣಕ್ಕಾಗಿ ಪ್ರತಿ ನಿತ್ಯ ಪತಿ ಮತ್ತು ಕುಟುಂಬಸ್ಥರು ಮಾನಸಿಕ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಹಲವು ಭಾರಿ ನ್ಯಾಯ ಪಂಚಾಯತಿ ಕೂಡ ಆಗಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಕಿರುಕುಳ ತಾಳಲಾರದೆ ಕಳೆದ ವರ್ಷ ಹೆಚ್.ಡಿ.ಕೋಟೆ ಪೊಲೀಸರಿಗೆ ಶಿವಮ್ಮ ದೂರು ನೀಡಿದ್ದರು ಎಂದು ಸುದ್ದಿ ಟಿವಿ ವರದಿ ಮಾಡಿದೆ.
ಸದ್ಯ ಪತಿ ಚಂದ್ರು ಬಂಧನವಾಗಿದ್ದು ಮಾವ ರಾಮೇಗೌಡ, ಅತ್ತೆ ಕೆಂಪಮ್ಮ ತಲೆ ಮರೆಸಿಕೊಂಡಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


