ಅದಾನಿ ವಿಷಯ ಮತ್ತು ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಿರೋಧ ಪಕ್ಷದ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿನಿಂದ ವಿಜಯ್ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಸಂಸದರು ಸಂಸತ್ತಿನ ಸಂಕೀರ್ಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸತ್ಯಮೇವ ಜಯತೆ ಎಂಬ ಬೃಹತ್ ಬ್ಯಾನರ್ ಮತ್ತು ಪ್ರಜಾಪ್ರಭುತ್ವ ಉಳಿಸಿ ಎಂದು ಬರೆದಿರುವ ಫಲಕಗಳನ್ನು ಹಿಡಿದುಕೊಂಡು ಸಂಸದರು ವಿಜಯ್ ಚೌಕ್ ಕಡೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು.
ಕಳೆದ ಕೆಲವು ವರ್ಷಗಳಲ್ಲಿ ಅದಾನಿ ಸಂಪತ್ತು ಇಷ್ಟೊಂದು ಪ್ರಮಾಣದಲ್ಲಿ ದ್ವಿಗುಣವಾಗಿದ್ದು ಹೇಗೆ, ವಿದೇಶಕ್ಕೆ ಹೋಗುವಾರ ಕೈಗಾರಿಕೋದ್ಯಮಿಯನ್ನು ಎಷ್ಟು ಬಾರಿ ಕರೆದುಕೊಂಡು ಹೋಗಿದ್ದೀರಿ. ಅದಾನಿ ವಿರುದ್ಧ ಎದ್ದ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಧಾನಿಗೆ ಸಾಧ್ಯವಾಗಿಲ್ಲ ಎಂದು ಖರ್ಗೆ ಹೇಳಿದರು.
ನಮಗೆ ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ಆಗಬೇಕು. ಸರ್ಕಾರ ಇದನ್ನು ಏಕೆ ರಚನೆ ಮಾಡಲು ಒಪ್ಪುತ್ತಿಲ್ಲ. ಜೆಪಿಸಿ ತನಿಖೆಗೆ ಏಕೆ ಹೆದರುತ್ತಿದ್ದೀರಿ. ಅಂದರೆ ಏನೋ ತಪ್ಪಾಗಿದೆ ಎಂದು ತಿಳಿಸಿದರು.
ಅದಾನಿ ಗ್ರೂಪ್ ವಿರುದ್ಧ ಕಾರ್ಪೋರೇಟ್ ವಂಚನೆ ಮತ್ತು ಸ್ಟಾಕ್ ಬೆಲೆ ಮ್ಯಾನಿಪುಲೇಷನ್ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಯನ್ನು ಪ್ರತಿಪಕ್ಷಗಳು ಬಯಸುತ್ತಿವೆ ಎಂದು ಕೇಳಿದರು.


