ಗುತ್ತಿಗೆದಾರರಿಂದ 40 ಲಕ್ಷ ಲಂಚ ಪಡೆದು ಸಿಕ್ಕಿಬಿದ್ದಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮನೆಯಲ್ಲಿ ಲೋಕಾಯುಕ್ತ ಪೊಲೀಸರು 6 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಖಾತೆ ಅಧಿಕಾರಿ ಪ್ರಶಾಂತ್ ಅವರು ಗುರುವಾರ ಸಂಜೆ ಕರ್ನಾಟಕ ಸಾಬೂನು ಮತ್ತು ಮಾರ್ಜಿಕ್ ಲಿಮಿಟೆಡ್ ಕಚೇರಿಯಲ್ಲಿ ಗುತ್ತಿಗೆದಾರರಿಂದ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಮೂಲಗಳನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ವಿರೂಪಾಕ್ಷಪ್ಪ ಅವರು ಕೆಎಸ್.ಡಿ.ಎಲ್ ನ ಅಧ್ಯಕ್ಷರಾಗಿದ್ದು, ಪ್ರಶಾಂತ್ ತಮ್ಮ ತಂದೆಯ ಪರವಾಗಿ ಲಂಚದ ಮೊದಲ ಕಂತು ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಕೆಎಸ್.ಡಿಎಲ್ ಕಚೇರಿಯಲ್ಲಿ ಮೂರು ಬ್ಯಾಗ್ ಗಳಲ್ಲಿ ನಗದು ತುಂಬಿರುವುದು ಪೊಲೀಸರಿಗೆ ಸಿಕ್ಕಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಲೋಕಾಯುಕ್ತರು ಪ್ರಶಾಂತ್ ಸಿಕ್ಕಿಬಿದ್ದ ತಕ್ಷಣ ಅವರ ಮನೆ ಮೇಲೆ ದಾಳಿ ನಡೆಸಿ ಶುಕ್ರವಾರವೂ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಲೋಕಾಯುಕ್ತ ಮೂಲಗಳ ಪ್ರಕಾರ ಶುಕ್ರವಾರ ಪ್ರಶಾಂತ್ ಅವರ ಮನೆಯಲ್ಲಿ ಆರು ಕೋಟಿ ಸಿಕ್ಕಿದೆ.
ಸಾಬೂನು ಮತ್ತು ಡಿಟರ್ಜೆಂಟ್ ಉತ್ಪಾದನೆಗೆ ಕೆಎಸ್.ಡಿ.ಎಲ್ ಗೆ ಅಗತ್ಯವಿರುವ ರಾಸಾಯನಿಕಗಳನ್ನು ಪೂರೈಸಿದ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಪ್ರಶಾಂತ್ ಸಿಕ್ಕಿಬಿದ್ದಿದ್ದಾರೆ. ಶಾಸಕರ ಪುತ್ರ 81 ಲಕ್ಷ ರೂಗೆ ಬೇಡಿಕೆ ಇಟ್ಟಿದ್ದು ಮೊದಲ ಕಂತಾಗಿ 40 ಲಕ್ಷ ರೂ ನೀಡಿದ್ದರು ಎಂದು ಹೇಳಲಾಗಿದೆ.


