ರಾಮನಗರ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ಕೂಡ ಜನಪ್ರತಿನಿಧಿ. ನನಗೂ ಶಿಷ್ಟಾಚಾರವಿದೆ. ಮಾಜಿ ಉಪಮುಖ್ಯಮಂತ್ರಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿಷ್ಟಾಚಾರ ಪಾಲನೆ ಮಾಡಬೇಕು ಎಂಬ ಪರಿಜ್ಞಾನ ಇಲ್ಲವೇ? ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕಲ್ಲವೇ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ನಿಮ್ಮನ್ನು ಬರಬೇಡಿ ಎಂದವರು ಯಾರು ಎಂದು ಅಶ್ವತ್ಥ ನಾರಾಯಣ ಅವರು ಕೇಳಿದರು. ರಾತ್ರಿ ಆಹ್ವಾನ ಕೊಟ್ಟು ಬೆಳಗ್ಗೆ ಕಾರ್ಯಕ್ರಮ ಮಾಡುತ್ತೀರಾ? ನೀವು ಈ ಕಾರ್ಯಕ್ರಮವನ್ನು ಯಾವಾಗಲಾದರೂ ನಿಗದಿ ಮಾಡಿ. ಆದರೆ ಶಿಷ್ಟಾಚಾರದ ಭಾಗವಾಗಿ ಅಧಿಕಾರಿಗಳ ಮೂಲಕ ನಮಗೆ ಸರಿಯಾದ ಮಾಹಿತಿಯನ್ನು ತಿಳಿಸಬೇಕು ಎಂದು ಸುರೇಶ್ ಸಚಿವರ ವಿರುದ್ಧ ಕಿಡಿಕಾರಿದರು.
ಈ ಸಂಬಂಧ ವೇದಿಕೆಯ ಕೆಳಗೆ ಸಂಸದ ಡಿ.ಕೆ.ಸುರೇಶ್ ಮತ್ತು ಸಚಿವ ಅಶ್ವತ್ಥನಾರಾಯಣ್ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲವರು ಮಧ್ಯಪ್ರವೇಶ ಮಾಡಿ ಉಭಯ ಮುಖಂಡರನ್ನು ಸಮಾಧಾನಪಡಿಸಿದರು. ವೇದಿಕೆಯ ಮೇಲೆ ಏರಿದ ನಂತರ ಇಬ್ಬರು ಪರಸ್ಪರ ಮಾತನಾಡಿದ ಪ್ರಸಂಗವೂ ನಡೆಯಿತು.


