ಭ್ರಷ್ಟಾಚಾರ ಮತ್ತು ಕಳಪೆಕಾಮಗಾರಿಗಳ ವಿರುದ್ಧ ನಡೆಸುವ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ನಗರ ಶಾಸಕ ಜ್ಯೋತಿಗಣೇಶ್ ಮಾಡುತ್ತಿದ್ದಾರೆ ಎಂದು ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಆರೋಪಿಸಿದ್ದಾರೆ.
ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅವೈಜ್ಞಾನಿಕ ಮತ್ತು ಕಳಪೆಗಾಮಗಾರಿಗಳು ನಡೆದಿವೆ. ಈ ಎಲ್ಲಾ ಕಾಮಗಾರಿಗಳು ಕಳಪೆಯಾಗಿದ್ದು ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಟೀಕಿಸಿದರು.
ಈ ಹಿಂದೆಯೂ ಸಹ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದೇವೆ. ಈ ಬಾರಿ ಪೇಎಂ.ಎಲ್.ಎ. ಪೋಸ್ಟರ್ ಅಂಟಿಸುವುದರ ಮೂಲಕ ಯುವಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದಕ್ಕಾಗಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟು ಹೋರಾಟವನ್ನು ಹತ್ತಿಕ್ಕು ಕೆಲಸ ಮಾಡಿದ್ದಾರೆ ಎಂದು ದೂರಿದರು.
ಕಾರ್ಯಕರ್ತರನ್ನು ರಕ್ಷಿಸಲು ಹೋದ ನನ್ನ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುವ ಕೆಲಸವನ್ನು ಮಾಡಿದ್ದಾರೆ. ತಾವು ಎಂದಿಗೂ ಸಹ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ದಫೇದಾರಗಳನ್ನು ಬಿಟ್ಟು ಬಿಟ್ಟು ಬೇರೆ ಯಾರು ಸಹ ಇರಲಿಲ್ಲ. ಠಾಣೆಯಲ್ಲಿ ಎಸ್.ಐ. ಇರಲಿಲ್ಲ ಎಂದ ಮೇಲೆ ಅವರೊಂದಿಗೆ ಅನುಚಿತವಾಗಿ ವರ್ತಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಪೊಲೀಸರು ದೌರ್ಜನ್ಯದಿಂದ ಕಾರ್ಯಕರ್ತರನ್ನು ಹಾಗೂ ನನ್ನನ್ನು ಬಂಧಿಸಲು ಮುಂದಾದಾಗ ಏರುಧ್ವನಿಯಲ್ಲಿ ಮಾತನಾಡಿದ್ದು ಸಹಜ ಹಾಗೂ ಸತ್ಯ. ಅದನ್ನೇ ತಪ್ಪು ಎಂದು ಭಾವಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ನೀತಿಯನ್ನು ಶಾಸಕರು ಹಾಗೂ ಪೋಲೀಸರು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.


