ದಾವಣಗೆರೆಯಲ್ಲಿ ಮಾರ್ಚ್ 4ರಂದು ನಡೆಯಲಿರುವ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾವೇಶಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಭಾಗಿಯಾಗಲಿದ್ದು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ಕಾಲ ಭ್ರಷ್ಟಾಚಾರ ಮಾಡಿ, ಚುನಾವಣೆ ಸಮೀಪವಿರುವಾಗ ಜನರಿಗೆ ಆಮಿಷಗಳನ್ನು ನೀಡಿ ಮತ್ತೆ ಅಧಿಕಾರಕ್ಕೆ ಬರಬಹುದೆಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭಾವಿಸಿವೆ. ಆದರೆ ಈ ಸಲ ಕರ್ನಾಟಕದ ಜನರು ದೆಹಲಿ ಹಾಗೂ ಪಂಜಾಬ್ನಲ್ಲಿ ಆಮ್ ಆದ್ಮಿ ಪಾರ್ಟಿ ತಂದಿರುವ ಸುಧಾರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ ಎಂದರು.
ದೆಹಲಿಯ ಜನರಿಗೆ 200 ಯೂನಿಟ್ ತನಕ ವಿದ್ಯುತ್, 20,000 ಲೀಟರ್ ನೀರು, ಗುಣಮಟ್ಟದ ಶಿಕ್ಷಣ, ಮಾತ್ರೆಯಿಂದ ಸರ್ಜರಿ ತನಕ ಎಲ್ಲ ವೈದ್ಯಕೀಯ ಸೌಲಭ್ಯಗಳು ಹಾಗೂ ಮಹಿಳೆಯರಿಗೆ ಸಾರಿಗೆ ಸೌಲಭ್ಯ ಉಚಿತವಾಗಿ ಸಿಗುತ್ತಿದೆ.
ಆದರೆ ಅಷ್ಟೇ ತೆರಿಗೆ ಕಟ್ಟುವ ಕರ್ನಾಟಕದಲ್ಲೇಕೆ ಇವು ಉಚಿತವಾಗಿ ಸಿಗುತ್ತಿಲ್ಲ ಎಂದು ಕರ್ನಾಟಕದ ಜನರು ಪ್ರಶ್ನಿಸುತ್ತಿದ್ದಾರೆ. ಈ ಮೂಲಕ ಈಗಾಗಲೇ ಜನಾಂದೋಲನವೊಂದು ರೂಪುಗೊಂಡಿದ್ದು, ಇದಕ್ಕೆ ಅಧಿಕೃತ ಚಾಲನೆ ನೀಡಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬರುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಭ್ರಷ್ಟ ಆಡಳಿತವನ್ನು ಅಂತ್ಯಗೊಳಿಸಿ, ಪ್ರಾಮಾಣಿಕ ಆಡಳಿತವನ್ನು ತರಲು ಶ್ರಮಿಸುತ್ತೇನೆ ಎಂದು ಪ್ರತಿಜ್ಞೆ ಮಾಡಲಾಗುತ್ತದೆ. ದೆಹಲಿಯ ಎಎಪಿ ಸರ್ಕಾರವು ವ್ಯವಸ್ಥಿತವಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ನಕಲು ಮಾಡಿ ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದು, ಈ ವಿಧಾನಸಭಾ ಚುನಾವಣೆಯು ಅಸಲಿ ಹಾಗೂ ನಕಲಿ ನಡುವಿನ ಹೋರಾಟವಾಗಿದೆ ಎಂದು ತಿಳಿಸಿದರು.


