ಇದು ನನ್ನ ಕೊನೆಯ ಭಾಷಣ ಎಂದು ವಿಧಾನಸಭೆ ಅಧಿವೇಶನದಲ್ಲಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗದ್ಗಿತರಾದ ಪ್ರಸಂಗ ನಡೆಯಿತು.
ಫೆಬ್ರವರಿ 22ರಂದು ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಇದು ನನ್ನ ಕೊನೆಯ ಭಾಷಣ. ಇನ್ನು ಮುಂದೆ ಸದನದಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳುವಾಗ ಭಾವುಕರಾದರು.
ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಮತ್ತೆ ನಾನು ಸದನದ ಒಳಗೆ ಬರುವ ಪ್ರಶ್ನೆಯೇ ಇಲ್ಲ ಎಂದು ಖಚಿತವಾಗಿ ಹೇಳಿದರು.
ಈ ವೇಳೆ ಯಡಿಯೂರಪ್ಪ ತುಸು ಭಾವುಕರಾಗಿದ್ದುದು ಕಂಡುಬಂತು. ಯಡಿಯೂರಪ್ಪ ವಿಧಾನಸಭೆಯಲ್ಲಿ ಇದು ಕೊನೆಯ ಭಾಷಣ ಎಂದು ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಅವರ ಮನವೊಲಿಸುವಂತೆ ಮಾತನಾಡಿದರು. ನೀವು ಹಿರಿಯ ನಾಯಕರು, ಮತ್ತೆ ಸದನಕ್ಕೆ ಬರಬೇಕು ಎಂದು ಮನವಿ ಮಾಡಿದರು.
ನನಗೆ ಪಕ್ಷ ಅತ್ಯುನ್ನತ ಸ್ಧಾನಮಾನವನ್ನು ನೀಡಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.


